ಜಯಪುರ: ಸಮೀಪದ ಚಿಕ್ಕನಹಳ್ಳಿ ಅರಣ್ಯ ಪ್ರದೇಶದ ಅರಸಿನಕೆರೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಹುಲಿಯೊಂದು ಕಾಣಿಸಿಕೊಂಡಿದ್ದು, ಹಸುವಿನ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
‘ಹಸುವಿನ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಆಟೋ ಹಾರನ್ ಶಬ್ದಕ್ಕೆ ಹಸುವನ್ನು ಬಿಟ್ಟು ಪೊದೆಯೊಳಗೆ ಹೋಯಿತು’ ಎಂದು ಪ್ರತ್ಯಕ್ಷದರ್ಶಿ ಗೋಪಾಲಪುರ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹುಲಿ ಜೊತೆಗಿರುವ ಎರಡು ಮರಿಗಳ ಸೆರೆಗಾಗಿ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಕ್ಯಾಮೆರಾ ಅಳವಡಿಸಿ, ಬೋನು ಇರಿಸಿರುವುದು ಬಿಟ್ಟರೆ, ಹುಲಿ ಸೆರೆಗಾಗಿ ಅರಣ್ಯ ಅಧಿಕಾರಿಗಳು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಜಮೀನುಗಳಿಗೆ ತೆರಳಲು ರೈತರು ಭಯ ಪಡುವಂತಾಗಿದೆ’ ಎಂದು ಅರಸಿನಕೆರೆ ಗ್ರಾಮದ ಆನಂದ್ ದೂರಿದರು.
‘ಜಯಪುರ ಸಮೀಪದ ಚಿಕ್ಕನಹಳ್ಳಿ ಹಾಗೂ ಅರಬ್ಬಿತಿಟ್ಟು ಅರಣ್ಯ ಪ್ರದೇಶಕ್ಕೆ ಹುಲಿಗಳು ಆಗಾಗ್ಗೆ ಬಂದು ಹೋಗುವುದು ಕ್ಯಾಮೆರಾ ಟ್ರ್ಯಾಪ್ನಲ್ಲಿ ಕಂಡುಬಂದಿದೆ. ಸಮೀಪದ ಮಂಡನಹಳ್ಳಿಯಲ್ಲಿ ಹುಲಿ ಸೆರೆಗಾಗಿ ಬೋನು ಇರಿಸಲಾಗಿದೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾರೆ, ಪ್ರತಿದಿನವೂ ಹುಲಿ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಸೆರೆ ಹಿಡಿಯಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಸುರೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.