ಮೈಸೂರು: ‘ಅಂಬೇಡ್ಕರ್ ಮನೆ ಮೇಲೆ ಕಲ್ಲು ತೂರಿ ವಿಧ್ವಂಸಕ ಕೃತ್ಯ ಎಸಗಿರುವ ವಿಚಾರದಲ್ಲಿ ದಲಿತೇತರ ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳು ದನಿ ಎತ್ತದಿರುವುದು ಶೋಚನೀಯ’ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಸೋಮವಾರ ಇಲ್ಲಿ ವಿಷಾದ ವ್ಯಕ್ತಪಡಿಸಿದರು.
‘ದಾಳಿಯನ್ನು ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾವ ಉದ್ದೇಶ ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ತಪ್ಪಿಸ್ಥರನ್ನು ಶೀಘ್ರವೇ ಬಂಧಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ನನಗೆ ರಾಜಕೀಯ ಪಕ್ಷ ಮುಖ್ಯ ಅಲ್ಲ; ಬದಲಾಗಿ ಅಂಬೇಡ್ಕರ್ ಅವರ ಸಂವಿಧಾನವೇ ಶ್ರೇಷ್ಠ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ’ ಎಂದರು.
‘ಎಲ್ಲಾ ಪಕ್ಷಗಳ ರಾಜಕಾರಣಿಗಳು ಹಾಗೂ ಸಂಘಟನೆಗಳು ದಾಳಿ ವಿಚಾರದಲ್ಲಿ ದನಿ ಎತ್ತಬೇಕು. ಕೇವಲ ವೋಟಿಗಾಗಿ ಅಂಬೇಡ್ಕರ್ ಹೆಸರು ಎತ್ತಬೇಡಿ. ಅಸ್ಪೃಶ್ಯರು ಎಂಬ ದೃಷ್ಟಿಕೋನದಲ್ಲಿ ಮಾತನಾಡಬೇಡಿ’ ಎಂದು ಮನವಿ ಮಾಡಿದರು.
ದೇಶ ಕಂಡ ನಿಜವಾದ ನಾಯಕ ಅಂಬೇಡ್ಕರ್. ದೇಶದ ಉಳಿದ ಯಾವ ನಾಯಕ ಅವರಷ್ಟು ಕಷ್ಟ ಎದುರಿಸಿದ್ದಾರೆ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
‘ಸಿದ್ದರಾಮಯ್ಯಇನ್ನೂ ಬುದ್ಧಿ ಕಲಿತಿಲ್ಲ’
ಮೈಸೂರು: ‘ತಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸೋತು ನೆಲಕಚ್ಚಿದರೂ ಸಿದ್ದರಾಮಯ್ಯ ಬುದ್ಧಿ ಕಲಿತಿಲ್ಲ. ಅದೇ ಧಾಟಿಯಲ್ಲಿ ಮಾತನಾಡುತ್ತಾ ಪಕ್ಷವನ್ನು ನಾಶ ಮಾಡುತ್ತಿದ್ದಾರೆ’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಟೀಕಾ ಪ್ರಹಾರ ನಡೆಸಿದರು.
‘ಕೋವಿಡ್ ವಿಚಾರದಲ್ಲಿ ಸಿದ್ದರಾಮಯ್ಯ ಏನೂ ಮಾತನಾಡದೆ ಸುಮ್ಮನಿರುವುದೇ ಒಳ್ಳೆಯದು. ಭ್ರಷ್ಟಾಚಾರ ವಿಚಾರದಲ್ಲಿ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕು ಇದೆ? ಕೇಂದ್ರದಲ್ಲಿ ಅವರ ಪಕ್ಷದ ಸರ್ಕಾರ ಇದ್ದಾಗ ಭ್ರಷ್ಟಾಚಾರ ನಡೆದಿರುವುದು ಗೊತ್ತಿಲ್ಲವೇ? ಏನಾದರೂ ಇದ್ದರೆ ಮುಖ್ಯಮಂತ್ರಿ ಭೇಟಿ ಮಾಡಿ ಚರ್ಚಿಸಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಬೇಡ’ ಎಂದು ಸಲಹೆ ನೀಡಿದರು.