ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ಕರಡು ಪ್ರಕಟ: ಜಿಲ್ಲೆಯಲ್ಲಿ 26,87,773 ಮತದಾರರು

Published 31 ಅಕ್ಟೋಬರ್ 2023, 13:56 IST
Last Updated 31 ಅಕ್ಟೋಬರ್ 2023, 13:56 IST
ಅಕ್ಷರ ಗಾತ್ರ

ಮೈಸೂರು: ‘ಮತದಾರರ ಪಟ್ಟಿ ನೋಂದಣಿ ಹಾಗೂ ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷಗಳ ಸಹಕಾರ ಮುಖ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮತದಾರರ ಪಟ್ಟಿ ವೀಕ್ಷಕ ಎಸ್. ಸೆಲ್ವಕುಮಾರ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಚಾಲ್ತಿಯಲ್ಲಿದ್ದು ಇದಕ್ಕೆ ಸಹಕರಿಸಬೇಕು’ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ‘ಹೆಚ್ಚು ಮತದಾರರು ಇರುವ ಕ್ಷೇತ್ರಗಳಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಬೇಕು. ಈಗಿರುವ ಮತಗಟ್ಟೆಯ ಪರಿಸ್ಥಿತಿ ಸರಿ ಇಲ್ಲದಿದ್ದರೆ ಸೂಕ್ತ ಸರ್ಕಾರಿ ಕಟ್ಟಡವನ್ನು ಮತಗಟ್ಟೆಯಾಗಿ ಗುರುತಿಸಬೇಕು’ ಎಂದು ಸೂಚಿಸಿದರು.

‘ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 1,97,60, ಕೃಷ್ಣರಾಜನಗರ–2,18,81, ಹುಣಸೂರು– 2,44,581, ಹೆಗ್ಗಡದೇವನಕೋಟೆ– 2,27,493, ನಂಜನಗೂಡು–2,21,428, ಚಾಮುಂಡೇಶ್ವರಿ–3,35,677, ಕೃಷ್ಣರಾಜ– 2,53,459, ಚಾಮರಾಜ– 2,50,963, ನರಸಿಂಹರಾಜ–2,96,014, ವರುಣ–2,36,360, ತಿ.ನರಸೀಪುರದಲ್ಲಿ 2,06,657 ಮತದಾರರಿದ್ದಾರೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 26,87,773 ಮತದಾರರಿದ್ದಾರೆ’ ಎಂದು ಮಾಹಿತಿ ನೀಡಿದರು.

ಕುಟುಂಬದವರು ಮಾಹಿತಿ ನೀಡಬೇಕು:

‘ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಅಧಿಕೃತ ಜಾಲತಾಣದಲ್ಲಿ (https://ceo.karnataka.gov.in) ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಹಾಗೂ ವಿವರ ಸರಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಹೆಸರು ಕೈಬಿಟ್ಟು ಹೋಗಿದ್ದಲ್ಲಿ ಸಂಬಂಧಿಸಿದ ಮತದಾರರ ನೋಂದಣಿ ಅಧಿಕಾರಿ ಗಮನಕ್ಕೆ ತಂದು, ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶವಿದೆ’ ಎಂದರು.

‘ಮತದಾರರ ಪಟ್ಟಿಯಲ್ಲಿ ಮೃತರ ಹೆಸರುಗಳು ಉಳಿದುಕೊಂಡಿದ್ದಲ್ಲಿ, ಅದರ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ಕುಟುಂಬದ ಸದಸ್ಯರು ನೀಡಬೇಕು. ಹೆಸರು ತೆಗೆಯಲು ಸಹಕರಿಸಬೇಕು’ ಎಂದು ತಿಳಿಸಿದರು.

‘ಮತದಾರರ ನೋಂದಣಿ ವಿಶೇಷ ಆಂದೋಲನವನ್ನು ನ.18 ಮತ್ತು 19ರಂದು ಹಾಗೂ ಡಿ.2 ಮತ್ತು 3ರಂದು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ 2024ರ ಜೂನ್ 21ರಂದು ಮುಕ್ತಾಯಗೊಳ್ಳಲಿದ್ದು, ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಹತಾ ದಿನಾಂಕ ನ.1 ಆಗಿದೆ. ಮತದಾರರ ಪಟ್ಟಿಯ ನೋಂದಣಿ ಕುರಿತು ಅರ್ಜಿ ಸ್ವೀಕೃತಿ ಸೆ.30ರಿಂದ ಪ್ರಾರಂಭವಾಗಿದ್ದು, ನಮೂನೆ 19ರಲ್ಲಿ ಅರ್ಜಿ ಸಲ್ಲಿಸಲು ನ.6 ಕೊನೆಯ ದಿನಾಂಕವಾಗಿದೆ. ಮತದಾರರ ಪಟ್ಟಿಯ ಹಸ್ತಪ್ರತಿ ಸಿದ್ಧಪಡಿಸುವುದು ಹಾಗೂ ಕರಡು ಮತದಾರರ ಪಟ್ಟಿಯನ್ನು ಮುದ್ರಿಸುವುದು ನ.20ರಂದು ನಡೆಯಲಿದೆ. ನ.23ರಂದು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಹಕ್ಕು ಮತ್ತು ಆಕ್ಷೇಪಗಳನ್ನು ನ.23ರಿಂದ ಡಿ.9ರವರೆಗೆ ಸಲ್ಲಿಸಬಹುದಾಗಿದೆ. ಹಕ್ಕು ಮತ್ತು ಆಕ್ಷೇಪಗಳನ್ನು ಇರ್ತ್ಯರ್ಥಪಡಿಸಿ ಪೂರಕ ಪಟ್ಟಿಗಳನ್ನು ಸಿದ್ಧಪಡಿಸಿ, ಮುದ್ರಿಸಲು ಡಿ.25 ಕೊನೆಯ ದಿನಾಂಕವಾಗಿದೆ. ಡಿ.30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

‘ಮತಗಟ್ಟೆ ಅಧಿಕಾರಿಗಳು ನಿಯೋಜಿಸಿದ ಮತಗಟ್ಟೆಗಳಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಬೇಕು’ ಎಂದು ರಾಜಕೀಯ ಪಕ್ಷಗಳ ಮುಖಂಡರು ಕೋರಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಲೋಕನಾಥ್, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಎಂ. ದಾಸೇಗೌಡ, ಜಿ.ಎಸ್ ಸೋಮಶೇಖರ್, ಕೌನ್ಸಿಲ್ ಕಾರ್ಯದರ್ಶಿ ಆರ್.ರಂಗಸ್ವಾಮಿ, ಉಪ ವಿಭಾಗಾಧಿಕಾರಿಗಳಾದ ಕೆ.ಆರ್. ರಕ್ಷಿತ್, ರುಚಿ ಬಿಂದಾಲ್, ತಹಶೀಲ್ದಾರ್‌ ಬಿ.ಎನ್. ಗಿರೀಶ್, ಎಚ್.ಡಿ. ಕೋಟೆ ತಹಶೀಲ್ದಾರ್‌ ಸಣ್ಣರಾಮಪ್ಪ, ಕಾಂಗ್ರೆಸ್ ಮುಖಂಡರಾದ ಶೌಕತ್, ಪಾಷಾ, ಜೆಡಿಎಸ್‌ನ ಬೋರೇಗೌಡ, ಬಿಜೆಪಿಯ ಪಾಪಣ್ಣ ಹಾಗೂ ಆಮ್ ಆದ್ಮಿ ಪಕ್ಷದ ರಾಘವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT