ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ನಗರ ಬಸ್ ನಿಲ್ದಾಣ ಎದುರಿನ ಲ್ಯಾನ್ಸ್ಡೌನ್ ಕಟ್ಟಡದ ಮುಂಭಾಗದಲ್ಲಿ ಒತ್ತುವರಿ ಮಾಡಿಕೊಂಡು ಆರಂಭಿಸಿರುವ ಎಸ್ಟಿಡಿ ಬೂತ್, ಟೈಪಿಂಗ್ ಸೆಂಟರ್ ಹಾಗೂ ನಾಮಫಲಕಗಳನ್ನು 24 ಗಂಟೆ ಒಳಗೆ ತೆರವುಗೊಳಿಸುವಂತೆ ಸಂಬಂಧಿಸಿದ ಮಾಲೀಕರಿಗೆ ಪಾಲಿಕೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಒಟ್ಟು 30 ಅಂಗಡಿಗಳ ಮಾಲೀಕರು, ತಮ್ಮ ಅಂಗಡಿಯ ಎದುರು ಜಾಗವನ್ನು ಒತ್ತುವರಿ ಮಾಡಿ ಕೊಂಡು ಪುಸ್ತಕ ಮಳಿಗೆ, ಎಸ್ಟಿಡಿ ಬೂತ್ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವಲಯ ಸಹಾಯಕ ಬಿ.ತಿಮ್ಮಪ್ಪ ನೇತೃತ್ವದ ತಂಡ ಲ್ಯಾನ್ಸ್ಡೌನ್ ಕಟ್ಟಡದ ಸರ್ವೆ ಕಾರ್ಯವನ್ನು ಕೈಗೊಂಡಿದೆ. 24 ಗಂಟೆ ಒಳಗೆ ಸಂಬಂಧಿಸಿದ ಮಾಲೀಕರು ತೆರವಿಗೆ ಮುಂದಾಗದಿದ್ದರೆ ಪಾಲಿಕೆಯೇ ತೆರವು ಕಾರ್ಯಾಚರಣೆ ಕೈಗೊಳ್ಳಲಿದೆ ಎಂದು ತಿಮ್ಮಪ್ಪ ಎಚ್ಚರಿಕೆ ನೀಡಿದರು.
ಈ ಕಟ್ಟಡದ ನೆಲ ಅಂತಸ್ತಿನಲ್ಲಿ 52 ಅಂಗಡಿ ಹಾಗೂ ಒಂದನೇ ಅಂತಸ್ತಿನಲ್ಲಿ 32 ಅಂಗಡಿ ಸೇರಿದಂತೆ ಒಟ್ಟು 82 ಅಂಗಡಿಗಳು ಇವೆ. ಈ ಎಲ್ಲ ಅಂಗಡಿಗಳಿಂದ ಪಾಲಿಕೆಗೆ ತಿಂಗಳಿಗೆ ಕೇವಲ ರೂ.50 ರಿಂದ 60 ಸಾವಿರ ಆದಾಯ ಬರುತ್ತಿದೆ. ಗುತ್ತಿಗೆ ಪಡೆದುಕೊಂಡಿರುವ ಕೆಲವು ಅಂಗಡಿಗಳ ಮಾಲೀಕರು, ಇನ್ನೊಬ್ಬರಿಗೆ ಉಪಗುತ್ತಿಗೆ ನೀಡಿರುವುದನ್ನೂ ಈ ಸಂದರ್ಭದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿತು.
ಕಟ್ಟಡದಲ್ಲಿರುವ ಕೆಲ ಅಂಗಡಿಗಳ ಮೇಲ್ಛಾವಣಿಗಳು ಶಿಥಿಲಾವಸ್ಥೆ ಯಲ್ಲಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರೂ.100 ಕೋಟಿ ಅನುದಾನದಲ್ಲಿ ಮೂಲ ಸ್ವರೂಪದಲ್ಲೇ ಕಟ್ಟಡದ ಮರು ನಿರ್ಮಾಣಕ್ಕೆ ಪಾಲಿಕೆ ಯೋಜನೆ ರೂಪಿಸಿದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಅಂಗಡಿಗಳ ಮಾಲೀಕರ ಸಮೀಕ್ಷಾ ಕಾರ್ಯವನ್ನು ಆರಂಭಿಸಿದ್ದಾರೆ. ಡಿಸಿ ಪರಿಶೀಲನೆ: ಸುಮಾರು 100 ವರ್ಷ ಹಳೆಯದಾಗಿರುವ ಈ ಕಟ್ಟಡ ಉತ್ತಮ ಸ್ಥಿತಿಯಲ್ಲಿ ಇದೆಯೋ, ಇಲ್ಲವೋ ಎಂಬುದನ್ನು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಬುಧವಾರ ಪಾಲಿಕೆ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಅಂಗಡಿ ಮಾಲೀಕರೊಂದಿಗೆ ಮಾತನಾಡಿ ವಿವರ ಪಡೆದುಕೊಂಡಿದ್ದರು.
ಆಗ ಅಂಗಡಿ ಮಾಲೀಕರು ಪುರಾತನ ಕಟ್ಟಡದಲ್ಲಿ ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿ ಕಾರಿಗೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಹರ್ಷಗುಪ್ತ ಅವರು ಪಾಲಿಕೆ ಅಧಿಕಾಗಳಿಂದ ಕಟ್ಟಡಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ವಿವರವಾಗಿ ಪಡೆದುಕೊಂಡಿದ್ದರು. ಬಳಿಕ ಕಟ್ಟಡದ ಹಿಂಭಾಗದ ಕಳಿಂಗ ಕಾಂಪ್ಲೆಕ್ಸ್ಗೆ ಭೇಟಿ ನೀಡಿ, ಸುತ್ತಮುತ್ತಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.