ತಿಕೋಟಾ: ‘ಎಲ್ಲ ಶಾಲೆಗಳ ಆವರಣಗಳಲ್ಲಿ ಸಸಿಗಳನ್ನು ನೆಟ್ಟು, ಬೆಳೆಸಿ, ಹಸಿರು ವನವನ್ನಾಗಿ ಮಾಡಬೇಕು’ ಎಂದು ಶಾಸಕ ಎಂ.ಬಿ.ಪಾಟೀಲ ಪುತ್ರ ಬಸನಗೌಡ ಪಾಟೀಲ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಜೈನಾಪುರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ‘ಕೋಟಿ ವೃಕ್ಷ ಅಭಿಯಾನ ಯೋಜನೆ’ ಅಡಿ ಸಸಿ ನೆಡುವುದು ಹಾಗೂ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ದೇಶದಲ್ಲಿಯೇ ಮಾದರಿ ರಾಜ್ಯ ಎನ್ನಿಸಿಕೊಂಡಿರುವ ಕರ್ನಾಟಕದಲ್ಲಿ 13 ಲಕ್ಷ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಯೋಜನೆ ಜಾರಿಯಲ್ಲಿದೆ. ಕೆಲವೆಡೆ ಈ ಯೋಜನೆ ಮುಗಿದಿದ್ದು, ಇನ್ನೂ ಕೆಲವೆಡೆ ಪ್ರಗತಿಯಲ್ಲಿದೆ. ಜಲಸಂಪನ್ಮೂಲ ಇಲಾಖೆಯಿಂದ ರಾಜ್ಯದ 3,500 ಕೆರೆ ಹಾಗೂ ಜಿಲ್ಲೆಯ 200 ಕೆರೆ ಹಾಗೂ ಹಳ್ಳಗಳನ್ನು ತುಂಬಿಸುವ ಕಾರ್ಯ ಜಾರಿಯಲ್ಲಿದೆ’ ಎಂದು ತಿಳಿಸಿದರು.
‘ನೀರಾವರಿ ಯೋಜನೆ ನಂತರ ಪರಿಸರವನ್ನು ರಕ್ಷಿಸಿ, ಬೆಳೆಸಲು ಈ ಕೋಟಿ ವೃಕ್ಷ ಅಭಿಯಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 85 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ವರ್ಷ 15 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ ಮೇಟಿ, ಆನಂದ ಬೋವಿ, ಸಿಆರ್ಪಿ ಸಂತೋಷ ಬೆಳ್ಳುಬ್ಬಿ, ಮುಖ್ಯಶಿಕ್ಷಕ ಬಿ.ಆರ್.ದಳವಾಯಿ, ಬಾಬಾಜಿ ದೇಸಾಯಿ, ಜಗನ್ನಾಥ ದೇಸಾಯಿ, ಹಣಮಂತ ಮುದಕರೆಡ್ಡಿ, ಭೀಮಶಿ ನಾಗರಾಳ, ಜಿ.ಐ.ಗೋಡ್ಯಾಳ, ಎಂ.ವಿ.ಪಾಟೀಲ ಇದ್ದರು.