ಬೆಂಗಳೂರು: ‘ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್’ ಹಾಗೂ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ‘ಕೋವಿಡ್ ಬಳಿಕ ಸಿದ್ಧತೆಗಳು: ಪೋಷಕರು ಮತ್ತು ಮಕ್ಕಳು’ ಎಂಬುದರ ಕುರಿತು ಇದೇ 19ರಂದು ಸಂಜೆ 5 ಗಂಟೆಗೆ ವೆಬಿನಾರ್ ಆಯೋಜಿಸಲಾಗಿದೆ.
ಕೊರೊನಾದಿಂದದೇಶದಾದ್ಯಂತ ಸ್ತಬ್ಧಗೊಂಡಿದ್ದ ಚಟುವಟಿಕೆಗಳು ಒಂದೊಂದಾಗಿ ಗರಿಗೆದರಿವೆ. ಎಂಟು ತಿಂಗಳ ಬಳಿಕ ಶಾಲಾ-ಕಾಲೇಜುಗಳ ಬಾಗಿಲು ತೆರೆಯಲಾರಂಭಿಸಿವೆ. ಆದರೂ ಮಕ್ಕಳು ಮತ್ತು ಪೋಷಕರನ್ನು ಆತಂಕ-ಗೊಂದಲ ಹಿಡಿದಿಟ್ಟುಕೊಂಡಿದೆ.
ಇವುಗಳನ್ನು ದೂರ ಮಾಡುವ ಉದ್ದೇಶದಿಂದ ಆಯೋಜಿಸಿರುವ ವೆಬಿನಾರ್ ಕಾರ್ಯಕ್ರಮದಲ್ಲಿ ಕೋವಿಡ್ ನಂತರದ ಈ ಸಂದರ್ಭದಲ್ಲಿ ನಾವು ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು? ಪೋಷಕರು ಅನುಸರಿಸಬೇಕಿರುವ ಕ್ರಮಗಳೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಮಕ್ಕಳ ಸಲಹೆಗಾರರಾದ ಡಾ.ಜ್ಞಾನಂ ಹಾಗೂ ಡಾ.ಜಗೀಶ್ ಚಿನ್ನಪ್ಪ ಅವರು ವೆಬಿನಾರ್ನಲ್ಲಿ ಮಾತನಾಡಲಿದ್ದಾರೆ. ಹೆಚ್ಚಿನ ಮಾಹಿತಿ ಪಡೆಯಲು ಇಚ್ಛಿಸುವವರು ಈ ವೆಬಿನಾರ್ನಲ್ಲಿ ಭಾಗವಹಿಸಬಹುದು.