ರಾಯಚೂರು: ಜಿಲ್ಲೆಯಲ್ಲಿ 31 ಎಂಎಸ್ಐಎಲ್ ಮಳಿಗೆ ಸೇರಿದಂತೆ ಒಟ್ಟು 123 ಮದ್ಯದಂಗಡಿಗಳನ್ನು ತೆರೆಯುವುದಕ್ಕೆ ಪರವಾನಿಗೆ ನೀಡಲಾಗಿದ್ದು, ಸೋಮವಾರ ಬೆಳಿಗ್ಗೆಯಿಂದಲೇ ಮದ್ಯಪ್ರಿಯರು ಸರದಿಯಲ್ಲಿ ನಿಂತಿದ್ದರು.
ಅದರಲ್ಲೂ ಎಂಎಸ್ಐಎಲ್ ಮಳಿಗೆಗಳ ಎದುರು ಸರದಿ ಸಾಲು ಉದ್ದವಾಗಿತ್ತು. ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬ್ಯಾರಿಕೇಡ್ ಹಾಗೂ ಚಿಹ್ನೆಗಿಂತಲೂ ಹೆಚ್ಚು ಜನರು ನೆರೆದಿದ್ದರು. ಆರಂಭದಲ್ಲಿ ಮಾತ್ರ ಅಂತರ ಕಾಯ್ದುಕೊಂಡಿರುವುದು ಕಂಡುಬಂತು, ಮಧ್ಯಾಹ್ನದ ನಂತರ ಗುಂಪಾಗಿ ನಿಂತು ಮದ್ಯ ಖರೀದಿಸುತ್ತಿರುವುದು ಕಂಡುಬಂತು.
ಲಿಂಗಸುಗೂರು, ಮಾನ್ವಿ, ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕು ಕೇಂದ್ರಗಳಲ್ಲಿರುವ ಸಿಎಲ್–2 ಮದ್ಯದಂಗಡಿಗಳ ಎದುರು ಸರದಿ ಏರ್ಪಟ್ಟಿತ್ತು. ಸಂಜೆ 7 ಗಂಟೆವರೆಗೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ.
ತಲುಪಿದ ಕಾರ್ಮಿಕರು: ಬೆಂಗಳೂರಿನಿಂದ 37 ಸರ್ಕಾರಿ ಬಸ್ಗಳಲ್ಲಿ ರಾಯಚೂರು ಜಿಲ್ಲೆಯ ಕಾರ್ಮಿಕರನ್ನು ಭಾನುವಾರ ತಡರಾತ್ರಿ ಕರೆತರಲಾಗಿದ್ದು, ಕೇಂದ್ರ ಬಸ್ ನಿಲ್ದಾಣದಲ್ಲಿ ಎಲ್ಲ ಆರೋಗ್ಯ ತಪಾಸಣೆ ನಡೆಸಲಾಯಿತು. ಆನಂತರ ಎಲ್ಲರನ್ನು ಸ್ವಗ್ರಾಮಗಳಿಗೆ ತಲುಪಿಸಲಾಯಿತು ಎಂದು ಜಿಲ್ಲಾಡಳಿತ ತಿಳಿಸಿದೆ.