ಶಕ್ತಿನಗರ (ರಾಯಚೂರು ಜಿಲ್ಲೆ): ಪೆದ್ದಕುರಂ (ಕುರ್ವಕುಲ) ಗ್ರಾಮ ಸಮೀಪದ ಕೃಷ್ಣಾನದಿಯಲ್ಲಿ ಸೋಮವಾರ ಸಂಜೆ ತೆಪ್ಪ ಮುಳುಗಿ ಬಾಲಕಿ ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ.
ತೆಲಂಗಾಣ ರಾಜ್ಯದ ಮಖ್ತಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಪಾಡುವಿನಲ್ಲಿ ಸಂತೆ ಮುಗಿಸಿಕೊಂಡು 13 ಮಂದಿ ತೆಪ್ಪದಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. 9 ಜನರನ್ನು ರಕ್ಷಿಸಲಾಗಿದೆ.
‘ಎಲ್ಲರೂ ರಾಯಚೂರು ತಾಲ್ಲೂಕಿನ ಗಡಿಪ್ರದೇಶದ ಪೆದ್ದಕುರಂ ಗ್ರಾಮದವರಾಗಿದ್ದು, ಬಾಲಕಿ ಮತ್ತು ಮೂವರು ಮಹಿಳೆಯರು ಕಾಣೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರೆದಿದೆ. ಎನ್ಡಿಆರ್ಎಫ್ ತಂಡ ಮತ್ತು ಯಾಪಲದಿನ್ನಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ತಹಶೀಲ್ದಾರ ಡಾ.ಹಂಪಣ್ಣ ಸಜ್ಜನ ತಿಳಿಸಿದರು.