ರಾಯಚೂರು: ಕೆಲಸದಿಂದ ತೆಗೆದು ಹಾಕಿರುವ ಬಿಎಸ್ಎನ್ಎಲ್ನ 41 ಜನ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಬಿಎಸ್ಎನ್ಎಲ್ ಕ್ಯಾಶುವೆಲ್ ಕಾಂಟ್ರಾಕ್ಟ್ ಕಾರ್ಮಿಕರ ಒಕ್ಕೂಟದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.
ರಾಯಚೂರು ಹಾಗೂ ಕೊಪ್ಪಳ ಬಿಎಸ್ಎನ್ಎಲ್ ಕಚೇರಿಯಲ್ಲಿ 15 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವವರಿಗೆ ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.
ಯಾವುದೇ ಮಾಹಿತಿ ಹಾಗೂ ವೇತನವನ್ನು ನೀಡದೇ 41 ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆ. ಮೈಸೂರಿನ ಬಿಎಸ್ಎನ್ಎಲ್ ಗುತ್ತಿಗೆ ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಳ್ಳಲು ಬೆಂಗಳೂರಿನ ಹೈಕೋರ್ಟ್ ಆದೇಶ ನೀಡಿದ್ದು, ಈ ಪ್ರತಿಯನ್ನು ಮುಖ್ಯ ಪ್ರಬಂಧಕರಿಗೆ ತಲುಪಿಸಲಾಗಿದೆ. ಆದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ದೂರಿದರು.
ಏಳು ತಿಂಗಳಿಂದ ಗುತ್ತಿಗೆ ಕಾರ್ಮಿಕರಿಗೆ ವೇತನ, ಬೋನಸ್, ಕನಿಷ್ಠ ಕೂಲಿ, ಭವಿಷ್ಯನಿಧಿಯ ವಾರ್ಷಿಕ ವರದಿ ಪತ್ರಗಳು ಹಾಗೂ ಗುರುತಿನ ಚೀಟಿಯನ್ನು ನೀಡಿಲ್ಲ. ಈ ಸೌಲಭ್ಯಗಳನ್ನು ಒದಗಿಸಲು ಕ್ರಮ ಜರುಗಿಸಬೇಕು. ಪ್ರತಿ ತಿಂಗಳು ಏಳನೇ ತಾರೀಖಿನೊಳಗೆ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವ ಅಧ್ಯಕ್ಷ ಶೇಕ್ಷಾಖಾದ್ರಿ, ಅಧ್ಯಕ್ಷ ವಿಠ್ಠಲ, ಧುರೇಂದ್ರ, ಆರ್.ವೆಂಕಟೇಶ, ಪ್ರದೀಪ್, ಸಿಐಟಿಯು ಕಾರ್ಯದರ್ಶಿ ಡಿ.ಎಸ್.ಶರಣಬಸವ, ಸೈಯದ್ ಹಾಜಿ, ಮಹಮ್ಮದ್ ಹನೀಫ್, ಮುತ್ತಯ್ಯ, ವಿಜಯ, ನಾಗರಾಜ ವೆಂಕಟೇಶ, ಎಂ.ವೀರೇಶ, ಅಲ್ತಾಫ್ ಹುಸೇನ್ ಇದ್ದರು.