ರಾಯಚೂರು: ಜಿಲ್ಲೆಯಲ್ಲಿ ರೈತರ ಜಮೀನಿನ ಸರ್ವೆ ಕಾರ್ಯ, ಪೋಡಿಮುಕ್ತ, ಫಾರ್ಮ್ 10 ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಎಲ್. ಚಂದ್ರಶೇಖರ್ ನಾಯಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಭೂ ವಿಸ್ತೀರ್ಣ ಸರ್ವೆ ಹಾಗೂ ವಿವಿಧ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದಿನ ತಿಂಗಳಿನ ಪ್ರಗತಿಯನ್ನು ಗಮನಿಸಿದರೆ ಈ ತಿಂಗಳು ಪ್ರಗತಿ ಸಾಧಿಸಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಗುರಿ ಸಾಧಿಸಬೇಕು. ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಮುಂದಿನ ಸಭೆ ನಡೆಸುವುದರ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಗದಿ ಪಡಿಸಿದ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು. ಲೈಸೆನ್ಸ್ ಸರ್ವೆಯರ್ ಕುರಿತಂತೆ ನಿಧಾನಗತಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ತ್ವರಿತ ಗತಿಯಲ್ಲಿ ಕೆಲಸ ಮಾಡುವ ಮೂಲಕ ಪೂರ್ಣಗೊಳಿಸಬೇಕು. ಲೈಸೆನ್ಸ್ ಸರ್ವೆಯರ್ ತಿಂಗಳಿಗೆ ಕನಿಷ್ಠ 23 ಕಡತಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ತಿಂಗಳು ಅವರ ಪರವಾನಗಿ ರದ್ದುಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹದ್ದುಬಸ್ತು, ಪೋಡಿಮುಕ್ತ, 11ಎ, ಫಾರ್ಮ ನಂ.10, ಪಹಣಿ ಸೇರಿದಂತೆ ಇತರೆ ಕಾರ್ಯಗಳನ್ನು ವಿಳಂಬ ಮಾಡದೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಯಾವುದೇ ರೀತಿಯ ತಾಂತ್ರಿಕಾ ಸಮಸ್ಯೆಗಳು ಇದ್ದಲ್ಲಿ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೈತರ ಕಡತಗಳನ್ನು ಆದಷ್ಟೂ ಬೇಗ ಮುಕ್ತಗೊಳಿಸಿ ಮೂರು ಹಿಯರಿಂಗ್ ಕರೆಯುವುದರ ಒಳಗಾಗಿ ಮುಕ್ತಗೊಳಿಸಿ, ಉಳಿದ ಎಲ್ಲ ಕಡತಗಳು 6ತಿಂಗಳು ಅಥವಾ 1ವರ್ಷದೊಳಗಾಗಿ ಇತ್ಯರ್ಥಪಡಿಸಬೇಕು. ಸರಿಯಾದ ರೀತಿಯ ಕಡತಗಳು ಇಲ್ಲದಿದ್ದರೆ ರೈತರಿಗೆ ನೋಟಿಸ್ ನೀಡಿ, ವಿನಾಕಾರಣ ವಿಳಂಬ ಮಾಡದೆ ನಿಮ್ಮ ವಿವೇಚನೆಯ ಪ್ರಕಾರ ಆದೇಶ ನೀಡಬೇಕು ಎಂದು ತಹಶೀಲ್ದಾರರಿಗೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ಉಪವಿಭಾಗಾಧಿಕಾರಿಗಳಾದ ರಜನಿಕಾಂತ್, ರಾಹುಲ್ ಸಂಕನೂರು, ತಹಶಿಲ್ದಾರ್ರಾದ ಡಾ.ಹಂಪಣ್ಣ ಸಜ್ಜನ್, ಮಂಜುನಾಥ ಭೋಗವಾತಿ, ಶ್ರೀನಿವಾಸ ಚಾಪಲ್, ಕೆ.ಕವಿತಾ ಮತ್ತಿತರರು ಇದ್ದರು.