ಹಟ್ಟಿ ಚಿನ್ನದ ಗಣಿ: ಅಧಿಸೂಚಿತ ಪ್ರದೇಶ ಸಮಿತಿ ಅಧಿಕಾರಿಗಳ ಉದಾಸೀನದಿಂದಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳಿಗೆ ವಿತರಿಸಬೇಕಾಗಿದ್ದ ಕಂಪ್ಯೂಟರ್ ಗಳು ದಶಕದಿಂದ ಕಚೇರಿಯಲ್ಲಿಯೇ ದೂಳು ತಿನ್ನುತ್ತಿವೆ.
22.75 ಎಸ್ಎಫ್ಸಿ ಯೋಜನೆಯಡಿಯಲ್ಲಿ ಕಂಪ್ಯೂಟರ್ ತರಬೇತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 35 ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಿಸಬೇ ಕಿತ್ತು.
‘ವಿತರಣೆ ಮಾಡುವಂತೆ ಹಲವು ಬಾರಿ ಕಚೇರಿಗೆ ಅಲೆದರೂ ವಿತರಣೆ ಮಾಡಿಲ್ಲ’ ಎಂದು ಫಲಾನುಭವಿಗಳಾದ ಅಶೋಕ, ವಿನೋದಕುಮಾರ, ರಮೇಶ, ಭಗವಂತ ಕುಮಾರ್ ಅಮರೇಶ, ಇಂದಿರಾ, ಮೂರ್ತಿ, ಪ್ರಭು ಹಾಗೂ ಅಮೃತಮ್ಮ ಆರೋಪ ಮಾಡಿದರು.
ವಿದ್ಯಾರ್ಥಿಗಳಿಗೆ ವಿತರಿಸಲು ₹9 ಲಕ್ಷ ವೆಚ್ಚದಲ್ಲಿ 42 ಕಂಪ್ಯೂಟರ್ಗಳನ್ನು ಖರೀದಿಸಿ ಇಡಲಾಗಿದೆ. ಖರೀದಿಸಿ 10 ವರ್ಷ ಕಳೆದರೂ ಇನ್ನೂ ವಿತರಿಸಿಲ್ಲ.
‘ಇಷ್ಟಾದರೂ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ. ಇದರ ಹಿಂದೆ ನಿಜವಾದ ಫಲಾನುಭವಿಗಳಿಗೆ ಕಂಪ್ಯೂಟರ್ ಸಿಗಬಾರದು ಎನ್ನುವ ಹುನ್ನಾರ ಇದೆ’ ಎಂದು ಜನ ದೂರಿದರು.
‘ಎಸ್ಸಿ, ಎಸ್ಟಿ ಮಕ್ಕಳಿಗೆ ವಿತರಣೆ ಮಾಡಬೇಕಾದ ಕಂಪ್ಯೂಟರ್ಗಳನ್ನು ಅಧಿಕಾರಿಗಳು ಕಚೇರಿಯಲ್ಲಿಯೇ ಸಂಗ್ರಹಿಸಿಟ್ಟಿದ್ದಾರೆ. ಆದಷ್ಟು ಬೇಗ ಮೇಲಧಿಕಾರಿಗಳು ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಕರುನಾಡ ವಿಜಯ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಚಂದ್ರ ಶೇಖರ ನಾಯಕ ತಿಳಿಸಿದರು.