ಸಿರವಾರ: ಲಾಕ್ಡೌನ್ ನಿಯಮಗಳನ್ನು ಮೀರಿ ಅಂಗಡಿ ತೆರೆದ ಮಾಲೀಕರು, ಅನವಶ್ಯಕವಾಗಿ ತಿರುಗಾಡಿದ ವಾಹನ ಸವಾರರಿಗೆ ಪೊಲೀಸ್, ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ದಂಡ ವಿಧಿಸಿದರು.
ಕೆಲ ವ್ಯಾಪಾರಿಗಳು ಸಮಯ ಮೀರಿ ವ್ಯವಹಾರ ನಡೆಸುತ್ತಿದ್ದರು. ಅಧಿಕಾರಿಗಳು ಅಂಗಡಿಗಳನ್ನು ಬಂದ್ ಮಾಡಿಸಿ ದಂಡ ವಸೂಲಿ ಮಾಡಿದರು.
ಮಾಸ್ಕ್ ಹಾಕದೇ ಅನವಶ್ಯಕವಾಗಿ ತಿರುಗಾಡುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಹಶೀಲ್ದಾರ್ ವಿಜಯೇಂದ್ರ ಹುಲಿ ನಾಯಕ ಹಾಗೂ ಪಿಎಸ್ಐ ಸುಜಾತ ನಾಯಕ ತಡೆದು ದಂಡ ಹಾಕುವ ಜತೆಗೆ ವಾಹನಗಳನ್ನು ಜಪ್ತಿ ಮಾಡಿದರು.
‘ಎರಡು ದಿನಗಳಲ್ಲಿ 40 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತರಕಾರಿ ವ್ಯಾಪಾರ ಆರಂಭ: ಅಂಗಡಿಯಲ್ಲಿಯೇ ತರಕಾರಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ವ್ಯಾಪಾರ ಬಂದ್ ಮಾಡಿದ್ದ ವ್ಯಾಪಾರಿಗಳ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಶುಕ್ರವಾರದಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣ, ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣ ಮತ್ತು ದೇವದುರ್ಗ ರಸ್ತೆಯ ಚುಕ್ಕಿ ಕಲ್ಯಾಣ ಮಂಟಪದ ಎದುರಿನ ಖಾಲಿ ಆವರಣದಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.