ರಾಯಚೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನಗರದ ರಿಮ್ಸ್, ಒಪೆಕ್ ಹಾಗೂ ನವೋದಯ ಆಸ್ಪತ್ರೆಗಳಿಗೆ ಮೇಲ್ವಿಚಾರಣೆ ಮಾಡಲು ರಚಿಸಿರುವ ಜಿಲ್ಲಾ ಮಟ್ಟದ ಸಮಿತಿಯು ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿತು. ಹಲವು ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಲಾಯಿತು.
ಸಮಿತಿಯ ಅಧ್ಯಕ್ಷ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ನೇತೃತ್ವದ ತಂಡವು, ಮೊದಲಿಗೆರಿಮ್ಸ್ಗೆ ಭೇಟಿ ನೀಡಿ, ಅಲ್ಲಿರುವ ಆಕ್ಸಿಜನ್ ಪೂರೈಕೆಯ ಯಂತ್ರಗಳು, ಕೋವಿಡ್ಗೆ ಚಿಕಿತ್ಸೆ ನೀಡಲು ನೂತನವಾಗಿ ನಿರ್ಮಿಸಲಾಗುತ್ತಿರುವ ಎರಡು ಕೊಠಡಿಗಳು, ಪ್ರಯೋಗಾಲಯಗಳನ್ನು ಪರಿಶೀಲಿಸಿದರು.
ನವೋದಯದಲ್ಲಿ 27 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೂವರೆಗೆ 77 ಸೋಂಕಿತರು ಚಿಕಿತ್ಸೆಪಡೆದಿದ್ದು, 2 ಸಾವುಗಳು ಸಂಭವಿಸಿವೆ ಎಂದು ನವೋದಯದ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕ ಅಶೋಕ್ ಮಹೇಂದ್ರಕರ್ ಮಾಹಿತಿ ನೀಡಿದರು.
ಕೋವಿಡ್ಗೆ ಚಿಕಿತ್ಸೆ ನೀಡಲು ಮುಂದೆ ಬಂದಿರುವ ನೀಯೋ ಫಾರ್ಚುನ್, ಲಕ್ಷ್ಮೀ ನಾರಾಯಣ, ಭಂಡಾರಿ ಸೇರಿದಂತೆ ಕೆಲವು ಖಾಸಗಿ ಆಸ್ಪತ್ರೆಗಳ ಸ್ಥಿತಿಗತಿಗಳು ಹಾಗೂ ಅಲ್ಲಿ ಚಿಕಿತ್ಸೆ ನೀಡುತ್ತಿರುವ ಕ್ರಮಗಳ ಬಗ್ಗೆ ಮುಂಬರುವ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ಡೀನ್ ಡಾ. ಬಸವರಾಜ ಪೀರಾಪುರ್, ನವೋದಯ ಆಸ್ಪತ್ರೆಯ ಡೀನ್ ಡಾ. ವಿಜಯಚಂದ್ರ, ಮೆಡಿಸಿನ್ ಮುಖ್ಯಸ್ಥ ಡಾ. ಶಂಕರಪ್ಪ, ಅನಸ್ತೇಷಿಯಾ ಮುಖ್ಯಸ್ಥ ಡಾ. ಬಾಲ ರಾಜ್ ಇದ್ದರು.