ರಾಯಚೂರು: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಳ್ಳುಬಂಡಿಯಲ್ಲಿ ಹಣ್ಣುಗಳನ್ನು ಪ್ರದರ್ಶಿಸುವ ಮೂಲಕ ಪ್ರಧಾನಮಂತ್ರಿ ಜನ್ಮದಿನವುನಿರುದ್ಯೋಗ ದಿನವಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ವಿನೂತನ ಪ್ರತಿಭಟನೆ ನಡೆಸಿದರು.
ದೇಶದ ಯುವಕರಿಗೆ 2 ಕೋಟಿ ಉದ್ಯೋಗ ನೀಡುವ ಭರವಸೆ ಈಡೇರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಪ್ರಧಾನಿ ಅವರ ಹುಟ್ಟುಹಬ್ಬವನ್ನು ಈ ರೀತಿಯ ಆಚರಿಸಲಾಗುತ್ತಿದೆ.ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಯುವಕರಿಗೆ ಭರವಸೆ ನೀಡಿದ್ದನ್ನು ಮರೆತಿದ್ದಾರೆ. ಏಳು ವರ್ಷಗಳ ಕಳೆದರೂ ಯಾವುದೇ ಉದ್ಯೋಗ ಸೃಷ್ಠಿ ಮಾಡಿಲ್ಲ. ವಿದ್ಯಾವಂತ ಯುವಕರಿಗೆ ಅನ್ಯಾಯ ಮಾಡಿದ್ದಾರೆ. ಯುವಕರಿಗೆ ಉದ್ಯೋಗ ನೀಡದೇ ಕೋಮುಭಾವನೆಗಳ ವಿಷಯ ಬಿತ್ತಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸುಮಾರು ಶೇ 10 ರಷ್ಟು ಏರಿಕೆ ಆಗಿದೆ. ದೇಶದ ಯುವಕರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಸರ್ಕಾರವನ್ನು ಪ್ರಶ್ನೆ ಮಾಡುವ ಯುವಕರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ ದೋತರಬಂಡಿ, ಅಮಲ್, ವಿಶಾಲ್, ರಾಜೇಂದ್ರ, ಸೋನು, ಶಹಬಾಜ್, ಬಾಬಾ ಖಾನ್, ರಘು, ಪ್ರವೀಣ ಇದ್ದರು.