ರಾಯಚೂರು: ನಗರದ ಗೋಶಾಲ ರಸ್ತೆಯ ಕಜಾರಿಯ ಟೈಲ್ಸ್ ಅಂಗಡಿಯಲ್ಲಿ ಸೋಮವಾರ ತಡರಾತ್ರಿ ವಿದ್ಯುತ್ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾಗ್ರಿ ನಾಶವಾಗಿದೆ.
ವಿದ್ಯುತ್ ಸ್ಪರ್ಶದಿಂದ (ಶಾರ್ಟ್ ಸರ್ಕಿಟ್) ಅವಘಡ ಸಂಭವಿಸಿದ್ದು, ತೀವ್ರ ಸ್ವರೂಪದ ಬೆಂಕಿ ಕಾಣಿಸಿಕೊಂಡು ಪಕ್ಕದ ಅಂಗಡಿ ಹಾಗೂ ಭಾಲ್ಕಿ ಆಸ್ಪತ್ರೆಗೆ ಬೆಂಕಿ ತಗುಲಿದೆ.
ಅಗ್ನಿ ದುರಂತದಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಟೈಲ್ಸ್ ಸುಟ್ಟಿವೆ. ಅಗ್ನಿ ಶಾಮಕದಳ ಬೆಂಕಿ ನಂದಿಸಿದ್ದಾರೆ. ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬೆಂಕಿ ಕಾಣಿಸಿಕೊಂಡಾಗ ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಆಸ್ಪತ್ರೆಗೆ ಬೆಂಕಿ ವಿಸ್ತರಿಸಿದ ಕಾರಣ ತುರ್ತಾಗಿ ಒಳ ರೋಗಿಗಳನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಯಿತು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ’ ಎಂದು ಭಾಲ್ಕಿ ಆಸ್ಪತ್ರೆಯ ಡಾ.ನಾಗರಾಜ ಬಾಲ್ಕಿ ತಿಳಿಸಿದ್ದಾರೆ.