ಶಕ್ತಿನಗರ: ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಕಲ್ಲಿದ್ದಲು ಸ್ಟಾಕರ್ ವಿಭಾಗದ ಹತ್ತಿರ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರೊಮೇಕ್ ಕಂಪನಿಯ ಎಂಜಿನಿಯರ್ ನಿಂಗಬಸಪ್ಪ ತಳವಾರ (52) ಮೃತಪಟ್ಟಿದ್ದಾರೆ.
ನಿಂಗಬಸಪ್ಪ ವಿಜಯಪುರದವರು. ಸುದರ್ಶನ ಮತ್ತು ಶಿವಕುಮಾರ ಅವರು ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಲಿದ್ದಲು ಸ್ಟಾಕರ್ ವಿಭಾಗದ ರಸ್ತೆ ಬದಿಯಲ್ಲಿ ಹೈಡ್ರೋಕ್ರೇನ್ ನಿಲ್ಲಿಸಲಾಗಿತ್ತು. ಅತಿವೇಗದಿಂದ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ಶಿವಕುಮಾರ ಅವರು, ನಿಂತಿದ್ದ ಹೈಡ್ರೋಕ್ರೇನ್ಗೆ ಡಿಕ್ಕಿ ಹೊಡೆದಿದ್ದಾರೆ.
ಕಾರಿನ ಮುಂಭಾಗದಲ್ಲಿ ಕುಳಿತಿದ್ದ ನಿಂಗಬಸಪ್ಪ ತಳವಾರ ಅವರ ತಲೆಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ನಂತರ ರಾಯಚೂರು ನಗರದ ಸುರಕ್ಷಾ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ನಿಂಗಬಸಪ್ಪ ಮೃತಪಟ್ಟಿದ್ದಾರೆ.
ಪ್ರೊಮೇಕ್ ಕಂಪನಿಯ ಸಹಾಯಕ ಎಂಜಿನಿಯರ್ ಬಸವರಾಜ ಹರಳ್ಳಿ ಅವರು ಈ ಬಗ್ಗೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.