ರಾಯಚೂರು: 2016ರ ಭೂ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಸತಿ ಮತ್ತು ಭೂಮಿ ಹಕ್ಕು ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು ಕಾಯ್ದೆ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದರು.
ದೇಶದ ಒಟ್ಟು ಭೂಮಿಯನ್ನು ಸರಿಯಾಗಿ ಸರ್ವೆ ಮಾಡದೇ ಅಸಮಾನತೆ ಸೃಷ್ಟಿ ಮಾಡಲಾಗಿದೆ. ಬಡ, ಕೃಷಿ ಕಾರ್ಮಿಕರಿಗೆ ಸಮಾನ ಹಂಚಿಕೆ ಮಾಡದ ಕಾರಣ ಸಮಸ್ಯೆಯಾಗಿದೆ. ಕಾಯ್ದೆಯಡಿ ಬಂಡವಾಳ ಶಾಹಿಗಳಿಗೆ ಕೃಷಿ ಭೂಮಿ ಗುತ್ತಿಗೆ ರೂಪದಲ್ಲಿ ಕೃಷಿ ಭೂಮಿ ನೀಡುವ ಹುನ್ನಾರ ಅಡಗಿದ್ದು, ಇದರಿಂದ ರೈತರಿಗೆ ಕೃಷಿ ಭೂಮಿ ಇಲ್ಲದಂತಾಗಿ ಮುಂದೆ ಭಾರಿ ಹೊಡೆತ ಬೀಳಲಿದೆ ಎಂದು ದೂರಿದರು.
ದೇಶದ ಬೆನ್ನೆಲುಬು ಎಂದು ರೈತರಿಗೆ ಕಾಯ್ದೆ ಮೂಲಕ ಭಾರಿ ಅನ್ಯಾಯ ಮಾಡುತ್ತಿದ್ದು, ಕಾಯ್ದೆಯಡಿ ಕೃಷಿ ಯೋಗ್ಯಭೂಮಿ ಪಡೆದು ಬಂಢವಾಳದಾರರಿಗೆ ಅನುಕೂಲ ಕಲ್ಪಿಸಬಹುದಾಗಿದೆ. ಕಾಯ್ದೆಯಿಂದ ಭವಿಷ್ಯದಲ್ಲಿ ರೈತರಿಗೆ ಕೃಷಿ ಕಾರ್ಮಿಕರಿಗೆ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಲಿದೆ. ಇದು ಅಪಾಯಕಾರಿ ಕಾಯ್ದೆ ಕೂಡಲೇ ಕಾಯ್ದೆ ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆಂಜನೇಯ ಕುರುಬದೊಡ್ಡಿ, ಮಾರೆಪ್ಪ ಹರವಿ, ಬೂದಯ್ಯ ಸ್ವಾಮಿ ಗಬ್ಬುರು, ಸುರೇಶ, ರೆಹಮತ್ ಇದ್ದರು.