ರಾಯಚೂರು: ಅನುಭವ ಮಂಟಪದ ಮೂಲಕ ಬಸವಾದಿ ಶರಣರ ಜೊತೆಗೂಡಿ ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವನ್ನು ಹಡಪದ ಅಪ್ಪಣ್ಣ ಅವರು ಮಾಡಿದ್ದಾರೆ ಎಂದು ಕರ್ನಾಟಕ ಪ್ರೌಢಶಾಲಾ (ಬಡ್ತಿ) ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ದಂಡಪ್ಪ ಬಿರಾದಾರ ತಿಳಿಸಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಸರಳ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶುಭ ಕಾರ್ಯಕ್ಕೆ ಹೊರಡುವ ಸಂದರ್ಭದಲ್ಲಿ ಕೆಲವರ ಮುಖ ನೋಡಿದರೆ ಅಪಶಕುನ ಎಂಬ ಭಾವನೆ ಇರುವಂತಹ ಸಂದರ್ಭದಲ್ಲಿ ಬಸವೇಶ್ವರರು ಹಡಪದ ಅಪ್ಪಣ್ಣನ ಅವರನ್ನು ಆಪ್ತ ಕಾರ್ಯದರ್ಶಿ ಮಾಡಿ ಗೌರವ ಕೊಟ್ಟಿದ್ದರು. ಸರಳ ಸಜ್ಜನಿಕೆಯ ನಿಜಸುಖಿ ಶರಣರಾಗಿದ್ದಾರೆ ಎಂದು ಹೇಳಿದರು.
ಹಲವಾರು ವಚನಗಳನ್ನು ಅಪ್ಪಣ್ಣ ರಚನೆ ಮಾಡಿದ್ದಾರೆ. ವ್ಯಕ್ತಿ ಯಾವ ಕೆಲಸ ಮಾಡಿದರೂ ಅದನ್ನು ಕಾಯಕ ಎಂದು ತಿಳಿದುಕೊಂಡು ಬದುಕಬೇಕು ಎಂದು ಸಾರಿದ್ದಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಬಿ.ನಾಯಕ ಅವರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು
ಮುಖಂಡರಾದ ಅಮೀನಗಡ ಅಮರಪ್ಪ, ದೇವೆಂದ್ರಪ್ಪ, ವೆಂಕಟೇಶ, ಧನಂಜಯ, ರವಿ, ಪ್ರಶಾಂತಕುಮಾರ, ಮಲ್ಲಿಕಾರ್ಜುನ ಇದ್ದರು.