ಕವಿತಾಳ: ಲಾಕ್ಡೌನ್ ಇದ್ದರೂ ಪಟ್ಟಣದಲ್ಲಿ ಬುಧವಾರ ವಾರದ ಸಂತೆ ನಡೆಯಿತು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿಗೆ ಮುಗಿಬಿದ್ದುದು ಕಂಡು ಬಂತು.
ಕಿರಾಣಿ, ತರಕಾರಿ ಮತ್ತು ಔಷಧ ಅಂಗಡಿಗಳು ಮದ್ಯಾಹ್ನದವರೆಗೆ ತೆರೆದಿರುತ್ತವೆ ಮತ್ತು ವಿವಿಧ ಓಣಿಗಳಲ್ಲಿ ವಾಹನಗಳಲ್ಲಿ ನಿತ್ಯ ತರಕಾರಿಯನ್ನು ಮಾರಾಟ ಮಾಡಲಾಗುತ್ತಿದೆ.
ಕೆಲವು ವಾರ್ಡ್ಗಳಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು ಬಡ ಕುಟುಂಬಗಳಿಗೆ ವಾರಕ್ಕೆ ಬೇಕಾಗುವಷ್ಟು ಅಗತ್ಯ ತರಕಾರಿಯನ್ನು ವಿತರಿಸಿದ್ದಾರೆ. ಹೀಗಿದ್ದರೂ ತಾಜಾ ತರಕಾರಿ ಸಿಗುತ್ತದೆ ಎನ್ನುವ ಕಾರಣಕ್ಕೆ ಜನರು ಸಂತೆಗೆ ಬಂದು ತರಕಾರಿ ಖರೀದಿಸಿದರು.
ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸದ ಸಾರ್ವಜನಿಕರು ಸರ್ಕಾರದ ಬಿಗಿ ಕ್ರಮಗಳನ್ನು ಲೆಕ್ಕಿಸದೆ ಸಂತೆಯಲ್ಲಿ ಸೇರಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪಂಚಾಯಿತಿ ಸಿಬ್ಬಂದಿ ಧ್ವನಿ ವರ್ಧಕದ ಮೂಲಕ ಮಾಹಿತಿ ನೀಡಿ ವ್ಯಾಪಾರ ನಡೆಸದಂತೆ ತಡೆಯಲು ಯತ್ನಿಸಿದಾಗ ಕೆಲವು ಯುವಕರು ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದರು. ನಂತರ ಪೊಲೀಸರು ಸಂತೆ ಬಂದ್ ಮಾಡಿಸಿದರು.
ಬ್ಯಾಂಕ್ಗಳು, ಗ್ರಾಹಕ ಸೇವಾ ಕೇಂದ್ರಗಳ ಮುಂದೆ ಮತ್ತು ಸಿಲಿಂಡರ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಮತ್ತು ಮಾಸ್ಕ್ ಧರಿಸದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.