ರಾಯಚೂರು: ಭತ್ತ ನಾಟಿ ಮಾಡುವುದಕ್ಕೆ 3 ವಾರಗಳ ಮುಂಚೆ ಹೆಕ್ಟೇರ್ಗೆ 5 ರಿಂದ 7 ಟನ್ ಕೊಟ್ಟಿಗೆ ಅಥವಾ 2 ಟನ್ ಕೋಳಿ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭತ್ತದ ಸಸಿಯ ಬೇರುಗಳನ್ನು ಆಜೋಸ್ಪಿರುಲಮ್ ಅಣುಜೀವಿ ಗೊಬ್ಬರದ ದ್ರಾವಣದಲ್ಲಿ 15-20 ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದರಿಂದ ಭತ್ತಕ್ಕೆ ಶಿಫಾರಸು ಮಾಡಿದ ಸಾರಜನಕದ ಶೇ 25 ರಷ್ಟು ಕಡಿಮೆ ಮಾಡಬಹುದು.
ಭತ್ತ ನಾಟಿ ಮಾಡಿದ ಮೂರು ಹಾಗೂ ಆರು ವಾರಗಳ ನಂತರ ಮತ್ತು ತೆನೆ ಬರುವ ಹಂತದಲ್ಲಿ ಎಕರೆಗೆ 10 ಕಿ.ಗ್ರಾಂ. ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು. ಪ್ರತಿ ಚದರ ಮೀಟರ್ ಕ್ಷೇತ್ರದಲ್ಲಿ 66 ಗುಣಿಗಳಷ್ಟು ಭತ್ತದ ಸಸಿಗಳನ್ನು ನಾಟಿ ಮಾಡಿ ಜತೆಗೆ ಪ್ರತಿ ಹೆಕ್ಟೇರ್ಗೆ 200 ಕಿ.ಗ್ರಾಂ ಸಾರಜನಕ, 100 ಕಿ.ಗ್ರಾಂ ರಂಜಕ ಮತ್ತು 100 ಕಿ.ಗ್ರಾಂ ಪೊಟ್ಯಾಶ್ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಅಥವಾ ಸಾವಯವ ಇಲ್ಲವೆ ಹಸಿರೆಲೆ ಗೊಬ್ಬರ (13 ಟನ್/ಹೆ) ಬಳಸುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ.
ಇಳುವರಿಯ ಸ್ಥಿರತೆ ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ನೀರಾವರಿ ಸೌಲಭ್ಯವಿರುವ ಕೂರಿಗೆ ಬಿತ್ತನೆ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್ ಭೂಮಿಗೆ ಶೇ 33 ರಷ್ಟು ಹೆಚ್ಚು ಬೀಜ ಮತ್ತು ಸಾರಜನಕ, ರಂಜಕ ಹಾಗೂ ಪೊಟ್ಯಾಶ್ ಒದಗಿಸುವ ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಮತ್ತು ಸತುವಿನ ಸಲ್ಫೇಟ್ ಬಳಸುವುದರಿಂದ ಭತ್ತದ ಇಳುವರಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.