ಕವಿತಾಳ: ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕುರಿತು ಇತ್ತೀಚೆಗೆ ಪ್ರತಿಯೊಬ್ಬ ಪಾಲಕರು ಕಾಳಜಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಫಾದರ್ ವಿಜಯರಾಜ್ ಗಂಟ್ಯಾಳ್ ಹೇಳಿದರು.
ಪಟ್ಟಣದ ನವಚೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂಗ್ಲೀಷ್ ಮಾಧ್ಯಮ ಶಾಲೆಯ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಆಸಕ್ತಿ ತೋರುವ ಗ್ರಾಮೀಣ ಭಾಗದ ಪಾಲಕರು ಒಳ್ಳೆಯ ಶಾಲೆಗಳ ಬಗ್ಗೆ ಯೋಚಿಸುತ್ತಿರುವುದು ಸಹಜವಾಗಿದೆ‘ ಎಂದರು.
‘ಕೊವಿಡ್ ಹಿನ್ನೆಲೆಯಲ್ಲಿ ದೀರ್ಘ ಅವಧಿಗೆ ಶಾಲೆಗಳು ಮುಚ್ಚಿದ ಪರಿಣಾಮ ಮಾನಸಿಕವಾಗಿ ಕುಗ್ಗಿದ್ದ ಮಕ್ಕಳಲ್ಲಿ ಇದೀಗ ತರಗತಿಗಳು ಆರಂಭವಾದ ನಂತರ ಚೈತನ್ಯ ಕಂಡು ಬರುತ್ತಿದೆ’ ಎಂದರು.
ಫಾದರ್ ವಿಜಯಕುಮಾರ ಮಾತನಾಡಿ, ‘ಮಕ್ಕಳ ಭಾವನೆಗಳನ್ನು ಅರಿತುಕೊಂಡು ಉತ್ತಮ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸಬೇಕಿದೆ’ ಎಂದರು.
ಶಿಕ್ಷಕ ಚಂದ್ರಶೇಖರ, ಶಾಂತಪ್ಪ ಮತ್ತು ಸಂಪನ್ಮೂಲ ವ್ಯಕ್ತಿ ಹುಸೇನ್ ಬಾಶಾ ಮಾತನಾಡಿದರು.
ಸಿಸ್ಟರ್ ಮೇಬಲ್, ಸುಶೀಲಾ, ಹಿಲ್ಡಾ, ಫಾದರ್ ರಾಯಪ್ಪ, ಮುಖಂಡ ಮರಿಯಪ್ಪ ಮತ್ತಿತರರು ಇದ್ದರು.
ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಜಿಲ್ಲಾ ಮಟ್ಟದ ಉತ್ತಮ ಸಿಆರ್ಪಿ ಪ್ರಶಸ್ತಿ ಪಡೆದ ಹುಸೇನ್ ಬಾಶಾ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ರಾಜಶೇಖರ ಅಮೀನಗಡ ಕಾರ್ಯಕ್ರಮ ನಿರೂಪಣೆ ಮಾಡಿದರು.