ರಾಯಚೂರು: ಜಿಲ್ಲೆಯಲ್ಲಿ ವರುಣನ ಅಬ್ಬರ ಕಡಿಮೆ ಆಗುತ್ತಿದ್ದಂತೆ ಗುರುವಾರದಿಂದ ಕೃಷ್ಣಾನದಿ ಹಾಗೂ ಭೀಮಾನದಿಗಳಲ್ಲಿ ಪ್ರವಾಹ ಉಕ್ಕಿ ಹರಿಯಲಾರಂಭಿಸಿದೆ.
ನಾರಾಯಣಪುರ ಜಲಾಶಯದಿಂದ 1.61 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾನದಿ ಹರಿಬಿಡಲಾಗುತ್ತಿದೆ. ಇದರಿಂದ ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದೆ.
ಪ್ರವಾಹ ಏರುಗತಿಯಲ್ಲಿದ್ದು, ದೇವದುರ್ಗ ತಾಲ್ಲೂಕಿನ ಹೂವಿನಹೆಡ್ಗಿ ಸೇತುವೆ ಕೂಡಾ ಮುಳುಗುವ ಭೀತಿ ಎದುರಾಗಿದೆ. ಪ್ರವಾಹದ ನೀರು 2.5 ಲಕ್ಷ ಕ್ಯುಸೆಕ್ ಮೀರಿದರೆ ಸೇತುವೆ ಮುಳುಗಡೆ ಆಗುತ್ತದೆ.
ಕಲಬುರ್ಗಿ ಜಿಲ್ಲೆಯ ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ನಿಂದ 3.20 ಲಕ್ಷ ಕ್ಯುಸೆಕ್ ನೀರನ್ನು ಭೀಮಾನದಿಗೆ ಹರಿಬಿಡಲಾಗುತ್ತಿದೆ. ರಾಯಚೂರು ತಾಲ್ಲೂಕಿನ ಕಾಡ್ಲೂರು, ಗುರ್ಜಾಪುರ ಗ್ರಾಮಗಳ ಬಳಿ ಭೀಮಾನದಿಯು ಕೃಷ್ಣಾನದಿಯಲ್ಲಿ ಸಂಗಮಗೊಳ್ಳುತ್ತದೆ. ಎರಡೂ ನದಿಗಳ ಪ್ರವಾಹ ಹೆಚ್ಚಳವಾಗುತ್ತಿದ್ದು, ಈಗಾಗಲೇ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ ಆಗಿದೆ. ಆರ್ಟಿಪಿಎಸ್, ವೈಟಿಪಿಎಸ್
ವಿದ್ಯುತ್ ಸ್ಥಾವರಗಳಿಗೆ ನೀರು ಸಂಗ್ರಹಿಸಲು ಈ ಅಣೆಕಟ್ಟು ನಿರ್ಮಿಸಲಾಗಿದೆ.
ಭೀಮಾ ನದಿಯಲ್ಲಿ ಪ್ರವಾಹ 5 ಲಕ್ಷ ಕ್ಯುಸೆಕ್ವರೆಗೂ ಏರಿಕೆ ಆಗಲಿದೆ. ಕೃಷ್ಣಾನದಿ ಪ್ರವಾಹ 2 ಲಕ್ಷ ಕ್ಯುಸೆಕ್ವರೆಗೂ ಹೆಚ್ಚಳವಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ನದಿಗಳ ಸಂಗಮದಿಂದ ನೀರು ಗುರ್ಜಾಪುರ ಗ್ರಾಮಕ್ಕೆ ನುಗ್ಗುತ್ತದೆ. ಈಗಾಗಲೇ ಗ್ರಾಮಸ್ಥರು ಪ್ರವಾಹ ಭೀತಿಗೆ ಒಳಗಾಗಿದ್ದಾರೆ.
ಅಧಿಕಾರಿಗಳು ಸಹ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು, ಕೃಷ್ಣಾನದಿ ಪಾತ್ರದಲ್ಲಿರುವ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳ ಗ್ರಾಮಗಳಲ್ಲಿ ಡಂಗುರದ ಮೂಲಕ ಜಾಗೃತಿ ಮೂಡಿಸಿದ್ದಾರೆ.
ಹೂವಿನಹೆಡ್ಗಿ ಸೇತುವೆ ಮುಳುಗಡೆ ಭೀತಿ
ದೇವದುರ್ಗ: ಸತತವಾಗಿ ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಪ್ರವಾಹ ಬಂದಿದ್ದು, ನಾರಾಯಣಪುರ ಅಣೆಕಟ್ಟೆಯಿಂದ ನದಿಗೆ 1.40ಕ್ಯುಸೆಕ್ ನೀರನ್ನು ಹರಿಬಿಟ್ಟಿರುವುದರಿಂದ ನೀರಿನ ಪ್ರಮಾಣ ಹೆಚ್ಚಳವಾಗಿದೆ.
ಇಲ್ಲಿನ ಹೂವಿನಹೆಡ್ಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಪ್ರವಾಹದಿಂದಾಗಿ ಮುಳುಗಡೆಯ ಭೀತಿ ಎದುರಾಗಿದೆ. ಗುರುವಾರ ಸೇತುವೆ ಹತ್ತಿರ 1.90ಕ್ಯುಸೆಕ್ ನೀರು ಹರಿಯುತ್ತಿದೆ ಎಂದು ಕೇಂದ್ರ ನೀರು ಮಾಪನ ಇಲಾಖೆಯ ಮೇಲ್ವಿಚಾರಕ ರಾಘವೇಂದ್ರ ತಿಳಿಸಿದರು.
ಕೃಷ್ಣಾ ನದಿಗೆ ಯಾವುದೇ ಸಂದರ್ಭದಲ್ಲಿಯಾದರೂ ಹೆಚ್ಚುವರಿ ನೀರು ಹರಿಬಿಡುವ ಸಂಭವ ಇರುವುದರಿಂದ ಶುಕ್ರವಾರ ನದಿ ಪ್ರವಾಹ ಇನ್ನಷ್ಟು ಹೆಚ್ಚಳವಾಗುತ್ತಿದೆ. ನದಿ ಪಾತ್ರದ ಗ್ರಾಮಗಳ ಜನರು ನದಿಗೆ ಇಳಿಯದಂತೆ ಎಚ್ಚರ ವಹಿಸಬೇಕೆಂದು ಈಗಾಗಲೇ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ.
3 ಗ್ರಾಮಗಳ ಸ್ಥಳಾಂತರ
ಶಕ್ತಿನಗರ: ಭೀಮಾ ನದಿಯಲ್ಲಿ ಪ್ರವಾಹ ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗುರ್ಜಾಪುರ, ಡಿ.ರಾಂಪೂರ, ಬೂರ್ದಿಪಾಡ ಗ್ರಾಮದ ಜನರನ್ನು ಗುರುವಾರ ರಾತ್ರಿಯೆ ಸ್ಥಳಾಂತರ ಮಾಡಿಸಲಾಗಿದೆ.
ಗ್ರಾಮ ಪಂಚಾಯಿತಿ ಪ್ರವಾಹ ನಿರ್ವಹಣಾ ಸಮಿತಿ ಸದಸ್ಯರು ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಉಪ ವಿಭಾಗಾಧಿಕಾರಿ ಸಂತೋಷಕುಮಾರ್ ಹಾಗೂ ತಹಶೀಲ್ದಾರ್ ಡಾ.ಹಂಪಣ್ಣ ಅವರು ಗ್ರಾಮದ ಜನರಿಗೆ ಪ್ರವಾಹದ ಮುನ್ನಚ್ಚರಿಕೆಯನ್ನು ಮನವರಿಕೆ ಮಾಡಿದ್ದಾರೆ.
ಕೃಷ್ಣಾ ಹಾಗೂ ಭೀಮಾ ನದಿಗಳು ಸಂಗಮವಾಗುವ ತೀರದಲ್ಲಿ ಗುರ್ಜಾಪುರ ಗ್ರಾಮವಿದ್ದು, ಭೀಮಾನದಿಯಿಂದ ನುಗ್ಗಿ ಬರುತ್ತಿರುವ
ಗ್ರಾಮದೊಳಗೆ ಪ್ರವೇಶಿಸುವ
ಸಾಧ್ಯತೆ ಇದೆ.
ಸದ್ಯಕ್ಕೆ ಕೃಷ್ಣಾನದಿಯಲ್ಲಿ 1.6 ಲಕ್ಷ ಕ್ಯುಸೆಕ್ ಹಾಗೂ ಭೀಮಾನದಿ ಯಲ್ಲಿ 3.2 ಲಕ್ಷ ಕ್ಯುಸೆಕ್ ಪ್ರವಾಹ ಹರಿಯುತ್ತಿದೆ. ಶುಕ್ರವಾರ ಎರಡೂ ನದಿಗಳು ಸೇರಿ 7 ಲಕ್ಷ ಕ್ಯುಸೆಕ್ ಅಧಿಕ ನೀರು ರಾಯಚೂರು ತಾಲ್ಲೂಕಿನುದ್ದಕ್ಕೂ ಹರಿದು ತೆಲಂಗಾಣ ಪ್ರವೇಶಿಸಲಿದೆ.
ರಾಯಚೂರು ತಾಲ್ಲೂಕಿನಲ್ಲಿ ಕೃಷ್ಣಾನದಿ ತೀರದಲ್ಲಿರುವ ಗ್ರಾಮಗಳಲ್ಲಿ ಮುನ್ನಚ್ಚರಿಕೆ ವಹಿಸಲಾಗಿದೆ. ನಡುಗಡ್ಡೆಗ್ರಾಮಗ ಳಾದ ಕುರವಕುಲ, ಕುರವ ಕುರ್ದಾ, ನಾರದಗಡ್ಡೆಹಾಗೂ ಓಂಕಾರಗಡ್ಡೆಗಳಿಗೆ ತೆಪ್ಪ ಹಾಕುವು ದನ್ನು ಸ್ಥಗಿತ ಮಾಡಲಾಗಿದೆ. ನಿರೀಕ್ಷೆಗೂ ಮೀರಿ ಪ್ರವಾಹ ಹರಿದು ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.