ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಮುಂಗಾರು ಮುಂಚೆಯೇ ಬಿತ್ತನೆ ಚುರುಕು

ಮೃಗಶಿರ ಮಳೆ ಆರಂಭ ನಂತರ ಬಿತ್ತನೆ ಮಾಡುವುದು ಉತ್ತಮ: ಸರಸ್ವತಿ
ಅಕ್ಷರ ಗಾತ್ರ

ಲಿಂಗಸುಗೂರು: ವಾರದ ಹಿಂದೆ ಮುಂಗಾರು ಪೂರ್ವ ಮಳೆ ಸುರಿದಿದ್ದರಿಂದ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೆಲ ಪ್ರದೇಶಗಳಲ್ಲಿ ರೈತರು ಮುಂಗಾರು ಮುಂಚೆಯೆ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೃಷಿ ಇಲಾಖೆ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ಹದ ಮಾಡುವಿಕೆ, ಬಿತ್ತನೆ ಬೀಜೋಪಚಾರ, ಗೊಬ್ಬರ ಬಳಕೆ ಪ್ರಮಾಣ ಸೇರಿದಂತೆ ಹೆಚ್ಚು ಇಳುವರಿ ನೀಡಬಹುದಾದ ಬಿತ್ತನೆ ಬೀಜಗಳು ಹಾಗೂ ಮುಂಗಾರು ಮಳೆ ಆರಂಭ ಮತ್ತು ಭೂಮಿಯಲ್ಲಿನ ತೇವಾಂಶದಿಂದ ಬೆಳೆಗಳಿಗೆ ಆಗಬಹುದಾದ ಲಾಭಗಳ ಕುರಿತು ಜಾಗೃತಿ ಅಭಿಯಾನ ಆರಂಭಿಸಿದೆ.

2022-23ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 55000 ಹೆಕ್ಟೇರ್ ಭತ್ತ, 1999 ಹೆಕ್ಟೇರ್ ಹೈಬ್ರಿಡ್‍ ಜೋಳ, 150 ಹೆಕ್ಟೇರ್ ಮೆಕ್ಕೆಜೋಳ, 22940 ಹೆಕ್ಟೇರ್ ಹೈಬ್ರಿಡ್‍ ಸಜ್ಜೆ, 60 ಹೆಕ್ಟೇರ್ ನವಣಿ, 24165 ಹೆಕ್ಟೇರ್ ತೊಗರಿ ಸೇರಿದಂತೆ ಸೂರ್ಯಕಾಂತಿ, ಎಳ್ಳು, ಹತ್ತಿ ಸೇರಿದಂತೆ ಒಟ್ಟು 58706 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ ಬಗ್ಗೆ ಕೃಷಿ ಇಲಾಖೆ ದೃಢಪಡಿಸಿದೆ.

‘ವಾರದ ಹಿಂದೆ ಸುರಿದ ಮಳೆಗೆ ಭೂಮಿ ಹಸಿಯಾಗಿದೆ. ಭವಿಷ್ಯದಲ್ಲಿ ಮಳೆ ಬರುತ್ತದೊ, ಬರುವುದಿಲ್ಲವೊ ತಿಳದಿಲ್ಲ. ಭೂಮಿ ಹಸಿ ಆದಾಗ ಬೀಜ ಬಿತ್ತನೆ ಮಾಡುತ್ತಿದ್ದೇವೆ. ಕೃಷಿ ಇಲಾಖೆ ಹೇಳಿದಂತೆ ವಾತಾವರಣ ರೈತರಿಗೆ ಸಾಥ್‍ ಕೊಡಬೇಕಲ್ಲ. ಹಾಗಾಗಿ ಬಿತ್ತನೆ ಕಾರ್ಯ ಮಾಡಿದ್ದೇವೆ. ಲಾಭ ನಷ್ಟ ಭೂಮಿ ತಾಯಿಗೆ ಬಿಟ್ಟ ವಿಷಯ’ ಎಂದು ರೈತ ಸಿದ್ರಾಮೇಶ ಬಾಳೆಗೌಡ್ರ ಹೇಳುತ್ತಾರೆ.

ಮುದಗಲ್ಲ, ಗುರುಗುಂಟಾ, ಲಿಂಗಸುಗೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಇತರೆ ಬಿತ್ತನೆ ಬೀಜಗಳ ಸಂಗ್ರಹಣೆಗೆ ಸಿದ್ಧತೆ ನಡೆಸಿದೆ. ಇನ್ನೊಂದಡೆ ಮುಂಗಾರು ಮಳೆ ಆರಂಭ ಮುಂಚೆ ಬಿತ್ತನೆಗೆ ರೈತರು ಮುಂದಾಗಿರುವುದು ಕೃಷಿ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

‘ಜೂನ್‌ ಮೊದಲ ವಾರ ಮುಂಗಾರು ಮಳೆ ಆರಂಭಗೊಳ್ಳುತ್ತಿದ್ದು ರೈತರ ಬೇಡಿಕೆ ಆಧರಿಸಿ ಹೆಚ್ಚು ಇಳುವರಿ ನೀಡಬಹುದಾದ ಬಿತ್ತನೆ ಬೀಜಗಳ ಸಂಗ್ರಹಣೆ ಆರಂಭಿಸಿದ್ದೇವೆ. ಯೂರಿಯಾ, ಡಿಎಪಿ, ಎಂಒಪಿ, ಸೇರಿದಂತೆ ಇತರೆ ಕಂಪೆನಿಗಳ ರಸಗೊಬ್ಬರ ದಾಸ್ತಾನಿಗೆ ಕರ್ನಾಟಕ ಮಾರ್ಕೆಟಿಂಗ್‍ ಫೆಡರೇಷನ್‍ ಮತ್ತು ರಸಗೊಬ್ಬರ ಮಳಿಗೆ ಮಾಲೀಕರಿಗೆ ದಾಸ್ತಾನಿಗೆ ಸೂಚನೆ ನೀಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಬಿ.ಕೆ.ಮಂಜುನಾಥಸ್ವಾಮಿ ತಿಳಿಸಿದರು.

*

ಮುಂಗಾರು ಮಳೆ ಆರಂಭಕ್ಕೆ ಮುಂಚೆಯೇ ರೈತರು ಬಿತ್ತನೆಗೆ ಮುಂದಾಗಿರುವುದು ಸರಿಯಲ್ಲ. ಮೃಗಶಿರ ಮಳೆ ಆರಂಭದ ನಂತರವೆ ಬಿತ್ತನೆ ಮಾಡಬೇಕು. ರೈತರಿಗೆ ಸರ್ಕಾರದ ಎಲ್ಲ ಸೌಲಭ್ಯ ನೀಡಲು ಇಲಾಖೆ ಸಿದ್ಧವಾಗಿದೆ

-ಎನ್‍.ಸರಸ್ವತಿ, ಕೃಷಿ ಇಲಾಖೆ ಉಪ ನಿರ್ದೇಶಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT