ಲಿಂಗಸುಗೂರು: ಸ್ಥಳೀಯ ಆಡಳಿತ ಹಾಗೂ ಕೇಂದ್ರ – ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳು ಪಟ್ಟಣ ಕೇಂದ್ರಿತವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳ ಜಾರಿಗೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಪುರಸಭೆ ವ್ಯಾಪ್ತಿಯ ಕರಡಕಲ್ಲ ಗ್ರಾಮ ಉತ್ತಮ ನಿದರ್ಶನವಾಗಿದೆ.
ಸ್ವಚ್ಛ ಭಾರತ ಅಭಿಯಾನ, ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರು ಪೂರೈಕೆ, ರಸ್ತೆ ನಿರ್ಮಾಣ, ಚರಂಡಿಗಳ ಮೇಲುಸ್ತುವಾರಿ ಮತ್ತು ನಿರ್ವಹಣೆಯಂತಹ ಕಾಮಗಾರಿಗಳು ಅನಾಥ ಸ್ಥಿತಿಯಲ್ಲಿವೆ. ಪುರಸಭೆ ಆಡಳಿತ ಮಂಡಳಿ ಈ ಬಗ್ಗೆ ಗಮನ ಸಹ ಹರಿಸುತ್ತಿಲ್ಲ ಎಂಬುದು ಕರಡಕಲ್ಲ ಗ್ರಾಮದ ನಿವಾಸಿಗಳ ಆರೋಪವಾಗಿದೆ.
ತಾಲ್ಲೂಕು ಕೇಂದ್ರದ ಸರ್ಕಾರಿ ಕಟ್ಟಡ, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ವಾಣಿಜ್ಯ ಮಳಿಗೆಗಳೆಲ್ಲ ಕರಡಕಲ್ಲ ಸೀಮಾಂತ ರದ ಜಮೀನುಗಳಲ್ಲಿ ನಿರ್ಮಾ ಣವಾಗಿವೆ. ಗ್ರಾಮ ಮಾತ್ರ ಇದುವ ರೆಗೂ ಅಭಿವೃದ್ಧಿಯ ಬೆಳಕು ಕಂಡಿಲ್ಲ. ಯೋಜನೆಗಳ ಅವೈಜ್ಞಾನಿಕ ಅನುಷ್ಠಾನ ದಿಂದ ದುರ್ನಾತದ ಮಧ್ಯೆ ಸ್ಥಳೀಯರು ದಿನಗಳನ್ನು ದೂಡುತ್ತಿದ್ದಾರೆ.
ಕರಡಕಲ್ಲ ಗ್ರಾಮದ ಮೂರು ವಾರ್ಡ್ ಗಳಿಂದ ಮಂಜುಳ ಶರಣಪ್ಪ, ರುದ್ರಪ್ಪ ಬ್ಯಾಗಿ ಮತ್ತು ಸೋಮನಗೌಡ ಪಾಟೀಲ ಸದಸ್ಯರಾಗಿ ಲಿಂಗಸುಗೂರು ಪುರಸಭೆಗೆ ಆಯ್ಕೆಯಾಗಿದ್ದಾರೆ. ಗ್ರಾಮದ ಸುತ್ತ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿ ಯಲ್ಲಿ ತಿಪ್ಪೆಗುಂಡಿಗಳೇ ಕಣ್ಣಿಗೆ ರಾಚುತ್ತವೆ. ಗ್ರಾಮೀಣ
ಪ್ರದೇಶದ ಅಭಿ ವೃದ್ಧಿಗೆ ಹತ್ತಾರು ಯೋಜನೆಗಳು ಬಂದಿದ್ದರು ಅವುಗಳಲ್ಲಿ ಯಾವುದೂ ಸಮರ್ಪಕವಾಗಿ ಕಾರ್ಯರೂಪಕ್ಕೆ ಬರು ತ್ತಿಲ್ಲ ಎಂಬುದು ಇಲ್ಲಿನವರ ದೂರು ಆಗಿದೆ.
ಶುದ್ಧ ಕುಡಿಯುವ ನೀರು ಪೂರೈಕೆ ಬಿಟ್ಟರೆ ಉಳಿದ ಸೌಲಭ್ಯಗಳು ಮರೀಚಿಕೆಯಾಗಿವೆ. ಎಲ್ಲಾ ಯೋಜನೆ ಗಳು ಲಿಂಗಸುಗೂರು ಪಟ್ಟಣಕ್ಕೆ ಸೀಮಿತವಾಗಿವೆ. ಸರಿಯಾದ ಚರಂಡಿ, ಶೌಚಾಲಯ ಸಹ ಇಲ್ಲಿ ಇಲ್ಲ. ಮೂರು ವಾರ್ಡ್ಗಳ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.
ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ ಕಟ್ಟಡ ಬಿಟ್ಟರೆ ಮಕ್ಕಳು, ರೈತರಿಗೆ ಅನುಕೂಲ ಆಗುವಂತಹ ಯಾವೊಂದು ಸೌಲಭ್ಯವೂ ಇಲ್ಲಿ ನೋಡಲು ಸಿಗುವುದಿಲ್ಲ. ತಾಲ್ಲೂಕು ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿದ್ದೇ ತಮಗೆ ಶಾಪವಾಗಿ ಪರಿಣಮಿಸಿದೆ ಎಂಬುದು ರೈತ ಸಮೂಹದ ಸಾಮೂಹಿಕ ಆರೋಪವಾಗಿದೆ.
‘ಕರಡಕಲ್ಲ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ಆಡಳಿತ ಮಂಡಳಿ ವಿಫಲವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಪ್ರದೇಶವನ್ನು ಕೊಳಚೆ ಪ್ರದೇಶವಾಗಿ ಘೋಷಣೆ ಮಾಡಿಲ್ಲ. ಕೃಷಿಕರಿಗೂ ಸೌಲಭ್ಯ ಕಲ್ಪಿಸಿಲ್ಲ. ಯೋಜನೆಗಳ ಅನುಷ್ಠಾನ ವೈಫಲ್ಯವೇ ಇದಕ್ಕೆ ಮೂಲ ಕಾರಣ’ ಎನ್ನುತ್ತಾರೆ ಗ್ರಾಮದ ಚಿಂತಕ ದುರುಗಪ್ಪ ಹೊಸಮನಿ.
ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ
‘ಪುರಸಭೆ ಕಾಯ್ದೆಯಡಿ ವಾರ್ಡ್ಗಳಿಗೆ ಸೌಲಭ್ಯ ಕಲ್ಪಿಸುತ್ತ ಬಂದಿದ್ದೇವೆ. ಕಸಬಾ ಲಿಂಗಸುಗೂರು, ಕರಡಕಲ್ಲ ವಾರ್ಡ್ಗಳಲ್ಲಿ ಅತಿ ಹೆಚ್ಚು ಕೃಷಿಕರು, ಕುರಿ ಸಾಕಾಣಿಕೆದಾರರು ಇದ್ದಾರೆ. ಅವರಿಗೆಲ್ಲ ಸೌಲಭ್ಯ ಕಲ್ಪಿಸಲು ಅವಕಾಶಗಳಿಲ್ಲ. ನಾನು ಈಚೆಗೆ ಅಧಿಕಾರ ಸ್ವೀಕರಿಸಿದ್ದೇನೆ. ಈ ಕುರಿತು ಆಡಳಿತ ಮಂಡಳಿಯ ಗಮನಕ್ಕೆ ತಂದು ಸರ್ಕಾರಕ್ಕೆ ವರದಿ ಸಲ್ಲಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.