ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೃಷ್ಣಾ, ತುಂಗಭದ್ರಾದಲ್ಲಿ ಏಕಕಾಲಕ್ಕೆ ಪ್ರವಾಹ

ನದಿತೀರದ ಗ್ರಾಮಗಳಿಗೆ ಮುನ್ನೆಚ್ಚೆರಿಕೆ ನೀಡಿದ ಆಡಳಿತ
Last Updated 6 ಆಗಸ್ಟ್ 2020, 14:03 IST
ಅಕ್ಷರ ಗಾತ್ರ

ರಾಯಚೂರು:ಕೃಷ್ಣಾನದಿ ಉಗಮಿಸುವ ಮಹಾರಾಷ್ಟ್ರದಲ್ಲಿ ಹಾಗೂ ತುಂಗಭದ್ರಾ ನದಿಗಳು ಉಗಮಿಸುವ ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಮಳೆ ಬೀಳುತ್ತಿದ್ದು, ಈ ವರ್ಷವೂ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಕೃಷ್ಣಾ ನದಿ ಜಲಾಶಯಗಳೆಲ್ಲ ಭರ್ತಿಯಾಗಿದ್ದು, ಮುಂಬರುವ ದಿನಗಳಲ್ಲಿ ನೀರಿನ ಹೊರಹೊರಿವು ನಿರಂತರವಾಗಿ ಹೆಚ್ಚಳವಾಗಲಿದೆ. ನಾರಾಯಣಪುರ ಜಲಾಶಯದಿಂದ 70 ಸಾವಿರ ಕ್ಯುಸೆಕ್‌ ಅಡಿ ಹೊರ ಬಿಡಲಾಗುತ್ತಿದೆ. ಮುಂಬೈನಲ್ಲಿ ಸುರಿಯುತ್ತಿರುವ ರಕ್ಕಸ ಮಳೆಯನ್ನು ಅವಲೋಕಿಸಿದರೆ, ಮುಂದಿನ ಎರಡೇ ದಿನಗಳಲ್ಲಿ ಪ್ರವಾಹ ಭಾರಿ ಏರಿಕೆ ಆಗಬಹುದು. ಬೆಳಗಾವಿ ಜಿಲ್ಲೆಯಲ್ಲಿ ವಾಹನ ಸಂಪರ್ಕದ ಕೆಲವು ಸೇತುವೆಗಳು ಈಗಾಗಲೇ ಮುಳುಗಡೆ ಆಗಿವೆ. ಅಲ್ಲಿಂದ ನೀರು ಹರಿದು ರಾಯಚೂರು ಜಿಲ್ಲೆಗೆ ತಲುಪಲು ಎರಡು ದಿನಗಳಾಗುತ್ತದೆ.

ಪ್ರವಾಹದ ಮುನ್ಸೂಚನೆ ಅರಿತಿರುವ ಜಿಲ್ಲಾಡಳಿತವು ಜನರ ಪ್ರಾಣಹಾನಿ ಆಗದಂತೆ ಈಗಾಗಲೇ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳೆಲ್ಲ ಕೃಷ್ಣಾನದಿ ನಡುಗಡ್ಡೆ ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಬಂದಿದ್ದಾರೆ. ಪ್ರವಾಹದ ಅಪಾಯ ಪರಿಸ್ಥಿತಿ ನಿರ್ವಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ವಿಪತ್ತು ನಿರ್ವಹಣೆ ಸಭೆ ನಡೆಸಲಾಗಿದ್ದು, ಕಳೆದ ವರ್ಷದ ಅನುಭವ ಆಧರಿಸಿ ಕ್ರಮಕ್ಕೆ ಸಜ್ಜಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಜಲದುರ್ಗದ ಬಳಿ ಕೃಷ್ಣಾನದಿ ಕವಲುಗಳಾಗಿ ಹರಿಯುತ್ತದೆ. ಒಂದುವರೆ ಲಕ್ಷ ಕ್ಯುಸೆಕ್‌ ದಾಟಿದರೆ, ಶೀಲಹಳ್ಳಿ ಗ್ರಾಮಸ್ಥರಿಗೆ ಸಂಪರ್ಕ ಕಡಿತವಾಗುತ್ತದೆ. ಅಧಿಕಾರಿಗಳು ಮುನ್ಸೂಚನೆ ನೀಡಿದ್ದರೂ ಮ್ಯಾದರಗಡ್ಡಿ ಸೇರಿ ಕೆಲವು ಗ್ರಾಮಗಳ ಜನರು ನಡುಗಡ್ಡೆಯಿಂದ ಸುರಕ್ಷಿತ ಸ್ಥಳಕ್ಕೆ ಬಂದಿರಲಿಲ್ಲ. ಹೀಗಾಗಿ ಪ್ರವಾಹವು ಐದು ಲಕ್ಷ ಕ್ಯುಸೆಕ್‌ಗೆ ತಲುಪಿದಾಗ ಸಂಕಷ್ಟ ಎದುರಿಸಬೇಕಾಯಿತು. ಜಲದುರ್ಗ ಸೇತುವೆ ಮುಳುಗಡೆಯಿಂದಾಗಿಜನರ ಸಂರಕ್ಷಿಸಲು ಹೋಗಿದ್ದ ಎನ್‌ಡಿಆರ್‌ಎಫ್‌ ತಂಡ ಕೂಡಾ ನಡುಗಡ್ಡೆಯಲ್ಲಿ ಸಿಲುಕಬೇಕಾಯಿತು. ಮ್ಯಾದರಗಡ್ಡಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಹೆಲಿಕಾಪ್ಟರ್‌ ಧಾವಿಸಿತ್ತು.

ಎರಡೂವರೆ ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರು ಬಂದರೆ ದೇವದುರ್ಗ ತಾಲ್ಲೂಕು ಹೂವಿನಹೆಡಗಿ ಸಂಪರ್ಕ ಸೇತುವೆ ಮುಳುಗಡೆ ಆಗುತ್ತದೆ. ರಾಯಚೂರು ತಾಲ್ಲೂಕು ಗಡಿಭಾಗ ಕಾಡ್ಲೂರ ಗ್ರಾಮದ ಬಳಿ ಕೃಷ್ಣಾನದಿ, ಭೀಮಾನದಿ ಸಂಗಮ ಆಗುವುದರಿಂದ ಪ್ರವಾಹ ಇನ್ನೂ ಹೆಚ್ಚಾಗುತ್ತದೆ. ಗುರ್ಜಾಪುರ, ಅರಷಿಣಗಿ ಗ್ರಾಮಗಳು ಪ್ರವಾಹ ಎದುರಿಸಬೇಕಾಗುತ್ತದೆ.

ಕಳೆದ ವರ್ಷ ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮಗಳ ಜನರನ್ನು ಸ್ಥಳಾಂತರಿಸಿ ಸರ್ಕಾರಿ ಶಾಲೆ ಗಂಜಿ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಈ ವರ್ಷ ಕೋವಿಡ್‌ ಸೋಂಕು ಇರುವುದರಿಂದ ಅಂತರ ಇರುವಂತೆ ಜನರನ್ನು ಇರಿಸುವ ಸವಾಲಿದೆ. ಸಮಸ್ಯೆ ಉದ್ಭವ ಆದಾಗಲೇ ಪರಿಹಾರ ಹುಡುಕುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದರು. ಈ ವರ್ಷವಾದರೂ ಸಮಸ್ಯೆಗಳನ್ನು ಅರಿತು ಮೊದಲೇ ಪರಿಹಾರ ಸಿದ್ಧ ಮಾಡಿಕೊಳ್ಳುವ ಅಗತ್ಯವಿದೆ.

ತುಂಗಭದ್ರಾದಲ್ಲೂ ಪ್ರವಾಹ: ತುಂಗಭದ್ರಾ ನದಿಯಲ್ಲೂ ಪ್ರವಾಹ ಆರಂಭವಾಗಿದೆ. ತುಂಗಭದ್ರಾ ಜಲಾಶಯದಿಂದ 8 ಸಾವಿರ ಕ್ಯುಸೆಕ್‌ ಅಡಿ ನೀರು ಹರಿಬಿಡಲಾಗುತ್ತಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ಪ್ರವಾಹ ಏರಿಕೆ ಆಗುವ ಸಾಧ್ಯತೆ ಇದೆ. ಒಂದೂವರೆ ಲಕ್ಷ ಕ್ಯುಸೆಕ್‌ ದಾಟಿದರೆ ಸಿಂಧನೂರು, ಮಾನ್ವಿ ತಾಲ್ಲೂಕಿನ ಕೆಲವು ಗ್ರಾಮಗಳ ಅಂಚಿಗೆ ಪ್ರವಾಹದ ನೀರು ನುಗ್ಗುತ್ತದೆ. 2009 ರಲ್ಲಿ ಉಂಟಾಗಿದ್ದ ಪ್ರವಾಹವನ್ನು ಅಧರಿಸಿ ಬಹುತೇಕ ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಬೆರಳೆಣಿಕೆ ಗ್ರಾಮಗಳ ಜನರು ಇನ್ನೂ ಹಳೇ ಜಾಗದಲ್ಲಿಯೇ ವಾಸ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT