ರಾಯಚೂರು: ಪ್ರತಿಯೊಬ್ಬರಿಗೂ ಸಂಗೀತದ ಅಗತ್ಯವಿದೆ ಎಂದು ಪತ್ರಕರ್ತ ವೆಂಕಟೇಶ ಹೂಗಾರ್ ಹೇಳಿದರು.
ನಗರದ ಬಸವ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಸವಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಘವೇಂದ್ರಸ್ವಾಮಿ ಹಾಗೂ ಇವರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನಸ್ಸಿಗೆ ದುಃಖವಾದಾಗಲೂ ಕೂಡಾ ಸಂಗೀತದ ಸಾಲುಗಳನ್ನು ನೆನಪಿಸಿಕೊಂಡು ಹಗುರವಾಗಬಹುದು. ಇತ್ತೀಚೆಗೆ ಶಾಸ್ತ್ರೀಯ ಸಂಗೀತದ ಹಾಡುಗಳಿಗಿಂತಲೂ ಸಿನಿಮಾ ಹಾಡುಗಳನ್ನು ಯುವಜನರು ಹಾಡುತ್ತಿದ್ದಾರೆ. ಆದರೆ, ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತುಕೊಳ್ಳುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್ ಮಿರ್ಜಾಪೂರ ಮಾತನಾಡಿ, ಕೊರೊನಾದಿಂದ ಎಲ್ಲರ ಜೀವನಶೈಲಿ ಬದಲಾಗಿದೆ. ಅದರಲ್ಲೂ ಸಂಗೀತಗಾರರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದರು. ಈಚೆಗೆ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಸರ್ಕಾರದಿಂದ ಅವಕಾಶ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಬಸವಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕಿ ಲಲಿತಾ ಬಸನಗೌಡ ಮಾತನಾಡಿ, ರಾಘವೇಂದ್ರ ಅವರು ಸಂಗೀತ ಕಾರ್ಯಕ್ರಮದ ಮೂಲಕ ಕೇಳುಗರಿಗೆ ಮುದನೀಡಲು ಪರಿಶ್ರಮ ಹಾಕಿದ್ದಾರೆ. ಹೀಗೆಯೇ ಸಂಗೀತದ ಕಾರ್ಯಕ್ರಗಳನ್ನು ಆಯೋಜಿಸುತ್ತಿರಲಿ ಎಂದು ಹಾರೈಸಿದರು.
ಬಸವಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರಸ್ವಾಮಿ ಹಾಗೂ ತಂಡದವರು ಸುಗಮ ಸಂಗೀತ ಪ್ರಸ್ತುತಪಡಿಸಿದರು. ನರಸಿಂಹಲು ಅರೋಲಿ ಕ್ಯಾಸಿಯೋ ನುಡಿಸಿದರು. ಅನಿಲಕುಮಾರ್ ಮಂಚೆಟ್ ಹಾರ್ಮೋನಿಯಂ ಹಾಗೂ ಬ್ರಹ್ಮೆಂದ್ರ ಮಂಜರ್ಲಾ ತಬಲಾ ಸಾತ್ ನೀಡಿದರು.