ಲಿಂಗಸುಗೂರು: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಕೊಲೆ ಮಾಡಿರುವ ಆರೋಪಿ ಸೇರಿ ತುಮಕೂರು, ಬೆಂಗಳೂರಿನ ಯುವತಿಯರ ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ತಂಜಿಮುಲ್ ಮುಸ್ಲಿಮೀನ್ ಕಮಿಟಿ ಸದಸ್ಯರು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ, ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು,‘ಹುಬ್ಬಳ್ಳಿಯ ನೇಹಾ ಹಿರೇಮಠರನ್ನು ಕೊಲೆ ಮಾಡಿರುವ ಫಯಾಜ್, ತುಮಕೂರಿನ ರುಕ್ಸಾನರನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಪ್ರದೀಪ್, ಬೆಂಗಳೂರಿನ ವಿದ್ಯಾರ್ಥಿನಿ ಅನುಷಾ ಅವರನ್ನು ಕೊಲೆಗೈದ ಸುರೇಶ ಮತ್ತು ಅವರ ಸಂಗಡಿಗರಿಗೆ ಬಹಿರಂಗವಾಗಿ ಗಲ್ಲು ವಿಧಿಸಬೇಕು’ ಎಂದು ಆಗ್ರಹಿಸಿದರು.
ಕಮಿಟಿ ಅಧ್ಯಕ್ಷ ಖಾದರ್ ಪಾಷಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತರಸಾಬ್, ಮುಖಂಡರಾದ ಸೈಯದ್ ಯೂನುಸ್ ಮುಫ್ತಿ, ಗೌಸ್ ಸಾಬ್, ಫಾಹೀಮ್, ಸಲಾಮ್, ಅಬ್ದುಲ್ ಖಯೂನ್, ಎಕ್ಬಾಲ್ ಹವಾಲ್ದಾರ, ಖಾಜಾಹುಸೇನ್ ಫೋಲವಾಲೆ, ಜಿಲಾನಿಪಾಷಾ ಹಾಗೂ ಶಬ್ಬೀರ್ ಹಾಜರಿದ್ದರು.