ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದು, ಒಂದೇ ದಿನ 250 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪೊಲೀಸ್ ಅಧಿಕಾರಿಗಳು ಏಕಕಾಲಕ್ಕೆ ಕೋವಿಡ್ ಜನಜಾಗೃತಿ ಮೂಡಿಸುವ ಜೊತೆಗೆ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಅಭಿಯಾನ ನಡೆಸಿದರು.
ಈಗಾಗಲೇ ದಂಡ ವಿಧಿಸುವುದು ಮುಂದುವರಿದಿದೆ. ಕರ್ನಾಟಕ ಎಪೆಡೆಮಿಕ್ ಆ್ಯಕ್ಟ್ ಸೆಕ್ಷೆನ್- 5 ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳು, ಕೋವಿಡ್ ನಿಯಮಗಳನ್ನು ಪಾಲನೆ ಮಾಡದೆ ಇರುವ ಸ್ಥಳಗಳಲ್ಲಿ ನಿಗಾ ವಹಿಸಲಾಗಿದೆ ಎಂದರು.
ಪೊಲೀಸರು ಅಲ್ಲಲ್ಲಿ ಈಗಾಗಲೇ ಮಾಸ್ಕ್ ತಪಾಸಣೆ ಮಾಡುತ್ತಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸುಸುವಂತೆ ಸೂಚಿಸಲಾಗುವುದು. ನಿಯಮ ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುವುದು. ದಯವಿಟ್ಟು ಜನರು ಕೋವಿಡ್ ನಿಯಮಗಳ ಪಾಲನೆ ಮಾಡಬೇಕು. ರಾಯಚೂರು ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿಯೇ ಕಳೆದ ವರ್ಷ 230 ಜನರಿಗೆ ಕೋವಿಡ್ ಬಂದಿತ್ತು. ಈ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಹೇಳಿದರು.
ಮಾಸ್ಕ್ ಧರಿಸದವರಿಗೆ ತಲಾ ₹250 ದಂಡ ವಿಧಿಸಲಾಯಿತು.
ಇನ್ಸ್ಪೆಕ್ಟರ್ ಮಲ್ಲಮ್ಮ ಚೌಬೆ, ಪಿಎಸ್ಐ ಮಂಜುನಾಥ, ಸಂಚಾರ ಠಾಣೆಯ ಪೊಲೀಸರು ಇದ್ದರು.