ರಾಯಚೂರು: ದೇಶವಿರೋಧಿ ಹೇಳಿಕೆ ನೀಡಿದ ಅಮೂಲ್ಯ ಲಿಯೋನ್ ಹಾಗೂ ಆರ್ದ್ರಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ವೀರ್ ಸಾವರ್ಕರ್ ಯೂಥ್ ಅಸೋಸಿಯೇಶನ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಪದಾಧಿಖಾರಿಗಳು ಅಮೂಲ್ಯ ಹಾಗೂ ಆರ್ದ್ರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಿಎಎ, ಎನ್ಆರ್ಸಿ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕೂಗುವ ಮೂಲಕ ಅಮೂಲ್ಯ ದೇಶದ್ರೋಹ ಎಸಗಿದ್ದು ಖಂಡನೀಯ.ಅದೇ ರೀತಿ ಆರ್ದ್ರ ಎನ್ನುವ ಯುವತಿ ಫ್ರೀ ಕಾಶ್ಮೀರ ಎಂದು ಫಲಕ ಹಿಡಿದು, ಪಾಕ್ ಪರ ಘೋಷಣೆ ಕೂಗಿದ್ದಾರೆ. ಆರೋಪಿಗಳಿಬ್ಬರೂ ಭಾರತದ ಅನ್ನ, ನೀರು ಕುಡಿದು ಶತ್ರುರಾಷ್ಟ್ರದ ಪರ ಘೋಷಣೆ ಕೂಗಿ ದೇಶದ್ರೋಹಿ ಕೃತ್ಯ ಎಸಗಿದ್ದಾರೆ. ಕೂಡಲೇ ಇವರಿಬ್ಬರನ್ನು ದೇಶದ್ರೋಹದ ಪ್ರಕರಣದ ಮೇಲೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಅಮೂಲ್ಯ ಹಿಂದಿರುವ ಸಂಘಟನೆಗಳನ್ನು ಪತ್ತೆಹಚ್ಚಿ ಕಾನೂನು ಪ್ರಕಾರ ಕ್ರಮ ವಹಿಸಬೇಕು. ಇಂಥವರಿಗೆ ಬೆನ್ನೆಲುಬಾಗಿ ನಿಂತಿರುವ ನಾಯಕರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಗೋವಿಂದರಾಜ್, ಪ್ರಶಾಂತಗೌಡ, ಸುರೇಶಬಾಬು ಹೊಸೂರು, ವಿಜಯರಾಜ್, ಅಂಜಿನಯ್ಯ, ಪಿ.ಮಹೇಶ, ಮಂಜು, ರಾಘವೇಂದ್ರ ಕಾಣೆ ಮತ್ತಿತರರು ಇದ್ದರು.