ರಾಯಚೂರು: ಜನನ, ಮರಣ ನೋಂದಣಿ ನಿಯಮ ಅನ್ವಯ ಆನ್ಲೈನ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು ಹಾಗೂ ಇ-ತಂತ್ರಾಶದಲ್ಲಿ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಾಗರಿಕ ನೋಂದಣಿ ಅಧಿನಿಯಮದ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಸಮನ್ವಯ ಸಮಿತಿಯೊಂದಿಗೆ ಗುರುವಾರ ವಿಡಿಯೋ ಸಂವಾದ ಸಭೆ ನಡೆಸಿದರು.
2020 ಜನವರಿಯಿಂದ ಡಿಸೆಂಬರ್ವರೆಗೆ ಎಷ್ಟು ಜನ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎನ್ನುವ ಸಂಖ್ಯೆ ಹಾಗೂ ವಿವರಣೆಯನ್ನು ಕೂಡಲೇ ಸಂಬಂಧಿಸಿದ ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಲಿಂಗಸೂಗೂರು ತಾಲ್ಲೂಕಿನಲ್ಲಿ 4 ಮತ್ತು ರಾಯಚೂರು ನಗರದಲ್ಲಿ 6 ಜನ ನಾನ್ಕೋವಿಡ್ ಒಂದು ಮಾತ್ರ ಕೋವಿಡ್ನಿಂದ ಮೃತ ಪಟ್ಟಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಸಂಪೂರ್ಣವಾದ ವರದಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇರಳ ಗಡಿಭಾಗದಲ್ಲಿ ಈಗಾಗಲೇ ಕೋವಿಡ್ 3ನೇ ಅಲೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿ, ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ಉರುಸು ಸೇರಿದಂತೆ ಇತರೆ ಜನದಟ್ಟಣೆ ಸೇರಿದಂತೆ ನೋಡಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜನನ ಮರಣ ನೋಂದಣಿ ಮಾಡಲು ಹೆಚ್ಚಿನ ರೀತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ಗಳನ್ನು ನೇಮಕ ಮಾಡಿಕೊಂಡು ಕಡ್ಡಾಯವಾಗಿ ಜನನ ಮರಣ ನೋಂದಣಿ ಮತ್ತು ಕೋವಿಡ್ನಿಂದ ಮೃತ ಪಟ್ಟವರ ಬಗ್ಗೆ ವರದಿ ನೀಡಬೇಕು. ಈ ಬಗ್ಗೆ ತಹಶೀಲ್ದಾರ್ ಮತ್ತು ಅರೋಗ್ಯ ಅಧಿಕಾರಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಕೆ.ಆರ್., ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಹಾಗೂ ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್, ಮತ್ತು ನಗರಸಭೆ ಪೌರಯುಕ್ತ ವೆಂಕಟೇಶ್ ಇದ್ದರು.