ರಾಯಚೂರು: ವಿದ್ಯಾರ್ಥಿಗಳಲ್ಲಿ ಸ್ಮರಣ ಶಕ್ತಿ ಹೆಚ್ಚಿಸಲು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆಪಠ್ಯ ಆಧಾರಿತ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆಎಂದು ಜವಾಹರ ನಗರ ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರು ಮುರಳೀಧರ ಕುಲಕರ್ಣಿ ಹೇಳಿದರು.
ನಗರದ ಕೆ.ಎಸ್.ಎಸ್.ಬಿ. ಜವಾಹರನಗರ ಪ್ರೌಢ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪಠ್ಯ ಆಧರಿತ ವಿಷಯಗಳನ್ನು ಒಳಗೊಂಡಿರುವ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗೋಲಿ ಸ್ಪರ್ಧೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷೆಗೆ ಬರುವ ಮಹತ್ವದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಬಣ್ಣದ ರಂಗೋಲಿ ಹಾಕಿ ಚಿತ್ರ ಬಿಡಿಸುವ ಮೂಲಕ ತಮ್ಮ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದ್ದಾರೆ ಎಂದರು.
ಗೃಹ ನಿರ್ಮಾಣ ಸಹಕಾರಿ ಸಂಘದ ಕಾರ್ಯದರ್ಶಿ ಕೆ.ಎಂ.ವೀರೇಶ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ ಬೆಳೆಸುವಲ್ಲಿ ಇಂತಹ ಸ್ಪರ್ಧೆಗಳು ತುಂಬಾ ಸಹಕಾರಿಯಾಗುತ್ತವೆ ಎಂದು ಹೇಳಿದರು.
’ಚಿತ್ರ ಬಿಡಿಸು ಚಿತ್ತ ಅರಳಿಸು’ ಎಂಬ ಶೀರ್ಷಿಕೆ ಅಡಿಯಲ್ಲಿ ವಿಜ್ಞಾನ, ಸಾಮಾಜಿಕ ಅಭ್ಯಾಸ, ಗಣಿತ ಹಾಗೂ ಕನ್ನಡದ ವಿಷಯಗಳನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ರಂಗೋಲಿ ಬಿಡಿಸಿದರು. ವಿಜ್ಞಾನದಲ್ಲಿ ಮಾನವ ಕಣ್ಣಿನ ರಚನೆ, ನರಕೋಶ, ಎಸ್.ಐ.ವಿ. ರಚನೆ, ಗಣಿತ ವಿಷಯದಲ್ಲಿ ಹಾಕಿದ ರಂಗೋಲಿಗಳಲ್ಲಿ ಡಿಮಾರ್ಕ್, ನಿಯಮಗಳು, ವೃತ್ತಗಳು ಮತ್ತು ಸಿಲಿಂಡರ್ನ ಸೂತ್ರಗಳು ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಬಿಡಿಸಿದ ಭಾರತ ನಕ್ಷೆಯ ಮತ್ತು ಅದರಲ್ಲಿರುವ ಭಾಗಗಳನ್ನು ಗುರುತಿಸಿದರು. ವಿಜ್ಞಾನದಲ್ಲಿ ಚಿತ್ರ ಬಿಡಿಸುವ ಪ್ರಶ್ನೆಗಳಿಗೆ 16 ಅಂಕ ಹಾಗೂ ಸಮಾಜ ವಿಷಯದಲ್ಲಿ 4 ಅಂಕಗಳು ನಿಗಧಿಪಡಿಸಲಾಗಿತ್ತು.
ಬಹುಮಾನ ವಿಜೇತರು: ಪ್ರಥಮ ಸ್ಥಾನ ಜ್ಯೋತಿ, ದ್ವಿತೀಯ ಸ್ಥಾನ ವಿನಯ, ತೃತೀಯ ಸ್ಥಾನ ಮುನಿಸ್ವಾಮಿ ಸಮಾಧನಕರ ಬಹುಮಾನ ಸತೀಶ, ಆಕಾಶ, ಇಬ್ರಾಹಿಂ ಪಡೆದರು.
ಸ್ಪರ್ಧೆಯ ನಿರ್ಣಾಯಕರಾಗಿ ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಪುಷ್ಪಲತಾ, ಲಕ್ಷ್ಮಿದೇವಿ, ಗಾಯತ್ರಿ, ನಿಂಗಮ್ಮ, ಸುಮಾಂಜಲಿ, ಸರಸ್ವತಿ ನಿರ್ವಹಿಸಿದರು. ವಿಜ್ಞಾನ ಶಿಕ್ಷಕಿ ಸಂಧ್ಯಾ. ಜಿ.ಎಸ್, ಗಣಿತ ಸಹಶಿಕ್ಷಕಿ ಪರಿಮಳಾ ದಿಗ್ಗಾವಿ, ಕನ್ನಡ ಶಿಕ್ಷಕ ಭೀಮದಾಸ ಡಿ. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.