ರಾಯಚೂರು: ‘ಓದುವುದು ಜೀವನದ ಮುಖ್ಯ ಉದ್ದೇಶವಾಗಬೇಕು. ಓದಿನಿಂದ ಜೀವನ ಪರಿವರ್ತನೆ ಆಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ ಹೇಳಿದರು.
ಗ್ರಂಥಪಾಲಕರ ದಿನಾಚರಣೆ ಹಾಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ತ ನಗರದ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ‘ರಾಯಚೂರಿನಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳು ಹಾಗೂ ಪುಸ್ತಕ ಪ್ರದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ರಾಯಚೂರು ಸಮೃದ್ಧಿಯಾದ ಜಿಲ್ಲೆ. ಈ ಜಿಲ್ಲೆಯಿಂದ ಹಲವಾರು ಕೆ.ಎ.ಎಸ್ ಹಾಗೂ ಐ.ಎ.ಎಸ್ ಅಧಿಕಾರಿಗಳಾಗಿದ್ದಾರೆ. ಓದುವ ಗುರಿಯನ್ನು ಹೊಂದುವ ಮೂಲಕ ಜೀವನದ ದಿಕ್ಕನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ’ ಎಂದರು.
‘ಜಿಲ್ಲೆಯು ಎರಡು ನದಿಗಳ ಸಮೃದ್ಧಿ ಸಂಪನ್ಮೂಲಗಳನ್ನು ಹೊಂದಿದೆ. ಇಂಥ ಜಿಲ್ಲೆಯ ಇರುವುದು ನಮ್ಮ ಅದೃಷ್ಟ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಿದ್ಯಾರ್ಥಿಗಳು ಪೂರಕವಾಗಿ ಕೆಲಸ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
‘ಸ್ವಾತಂತ್ರ್ಯ ಹೋರಾಟದ ಬಗ್ಗೆ ನಾವು ಹೆಚ್ಚು ಓದುವ ಮೂಲಕ ಅಂದಿನ ದಿನಗಳನ್ನು ಮೆಲುಕು ಹಾಕುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಈ. ವಿನಯಕುಮಾರ್ ಮಾತನಾಡಿ, ವಿದ್ಯಾಭ್ಯಾಸ ಎನ್ನುವುದು ಕೇವಲ ಉಚಿತವಾಗಿ ಸಿಗುವುದಿಲ್ಲ. ಅದು ಪರಿಶ್ರಮದಿಂದ ಮಾತ್ರ ಸಾಧ್ಯ. ಈಗ ಸರ್ಕಾರದ ಸೌಲಭ್ಯಗಳಿದ್ದು, ಆ ಸೌಲಭ್ಯಗಳನ್ನು ಪಡೆಯುವ ಮೂಲಕ ಉತ್ತಮ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಈ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಹೇಳಿದರು.
‘ನಗರ ಗ್ರಂಥಾಲಯದಲ್ಲಿ ಉತ್ತಮ ವ್ಯವಸ್ಥೆ ಇದ್ದು, ಸದುಪಯೋಗ ಪಡೆಯಬೇಕು. ಮುಂದಿನ ದಿನಗಳಲ್ಲಿ ನಗರಸಭೆಯಿಂದ ಗ್ರಂಥಾಲಯಕ್ಕೆ ಬೇಕಾದ ಸಹಾಯ ಮತ್ತು ಸಹಕಾರ ನೀಡಲು ಸಿದ್ಧ’ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟದ ಕುರಿತು ನಿವೃತ್ತ ಪ್ರಾಧ್ಯಾಪಕ ರಾಮಣ್ಣ ಹವಳೆ ವಿಶೇಷ ಉಪನ್ಯಾಸ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರ ಡಿ.ಪಂಪಣ್ಣ, ನಗರಸಭೆ ಸದಸ್ಯ ಜಯಣ್ಣ, ಬಿ.ರಮೇಶ, ಸಾಹಿತಿ ವೀರ ಹನುಮಾನ್, ಮಲ್ಲೇಶ್ ಕೊಲಮಿ, ಸೈಯದ್ ಹಫೀಜುಲ್ಲಾ, ಭೀಮನಗೌಡ ಇಟಗಿ, ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಎಸ್.ರಬಿನಾಳ ಇದ್ದರು.