ಮಾನ್ವಿ: ನೆರವಿನ ನಿರೀಕ್ಷೆಯಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆ

ಮಾನ್ವಿ: ತಾಲ್ಲೂಕಿನ ಹಿರೇಕೊಟ್ನೇಕಲ್ ಗ್ರಾಮದ ವಿದ್ಯಾರ್ಥಿನಿ ತುಳಜಾ ಭವಾನಿ ಶ್ಯಾಮ್ಸಿಂಗ್ ಅಂತರರಾಷ್ಟ್ರೀಯ ಇಂಡೋ ನೇಪಾಳ ಚಾಂಪಿಯನ್ಶಿಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ನೇಪಾಳದ ಪಿಸಿಎ ಸ್ಪೋರ್ಟ್ಸ್ ಇವೆಂಟ್ಸ್ ಮ್ಯಾನೇಜಮೆಂಟ್, ಯುವ ಹಾಗೂ ಕ್ರೀಡಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಡಿ.14ರಂದು ಇಂಡೋ ನೇಪಾಳ ಚಾಂಪಿಯನ್ಶಿಪ್-2022 ಕ್ರೀಡಾಕೂಟವನ್ನು ಆಯೋಜಿಸಿವೆ. ಈ ಕ್ರೀಡಾಕೂಟದಲ್ಲಿ ತುಳಜಾ ಭವಾನಿ ವೈಯಕ್ತಿಕ ವಿಭಾಗದ 400 ಮೀ ಓಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾಳೆ.
ಪ್ರಸ್ತುತ ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಿಜಿಎಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಓಟದ ಸ್ಪರ್ಧೆಯಲ್ಲಿ ತುಳಜಾ ಭವಾನಿ ದ್ವಿತೀಯ ಸ್ಥಾನ ಪಡೆದದ್ದನ್ನು ಗುರುತಿಸಿ ಇಂಡೋ ನೇಪಾಳ ಚಾಂಪಿಯನ್ಶಿಪ್ ಕ್ರೀಡಾ ಕೂಟಕ್ಕೆ ಆಯ್ಕೆ ಮಾಡಲಾಗಿದೆ. ತುಳಜಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಳು ಎಂದು ಶ್ರೀಗುರುಶಾಂತ ಶಿವಾಚಾರ್ಯ ವಿದ್ಯಾಪೀಠದ ಮುಖ್ಯಸ್ಥ ಚನ್ನಬಸವ ಸ್ವ್ವಾಮಿ ಹಿರೇಮಠ ತಿಳಿಸಿದ್ದಾರೆ. ಅಂತರ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾ ಗಿರುವ ತುಳಜಾ ಭವಾನಿಯ ಸಾಧನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ದ್ದಾರೆ.
ಆರ್ಥಿಕ ನೆರವಿಗೆ ಮನವಿ: ತುಳಜಾ ಭವಾನಿ ಇಂಡೋ ನೇಪಾಳ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕಾಗಿ ತೆರಳಲು ಸುಮಾರು ₹ 30 ಸಾವಿರ ಅಗತ್ಯವಿದೆ. ಬಡ ಕುಟುಂಬದ ಹಿನ್ನೆಲೆಯ ತುಳಜಾ ಭವಾನಿ ನೇಪಾಳಕ್ಕೆ ತೆರಳಲು ಸ್ಥಳೀಯ ಜನಪ್ರತಿನಿಧಿಗಳು, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಆರ್ಥಿಕ ನೆರವು ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.