ರಾಯಚೂರು: ನಗರ ಸೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಭಾನುವಾರ ಸಂಕ್ರಾಂತಿ ಹಬ್ಬದ ಆಚರಣೆ ನಡೆಯಿತು.
ಸಂಕಮಣದ ಅಂಗವಾಗಿ ಜನರು ಜಿಲ್ಲೆಯಲ್ಲಿ ಕೃಷ್ಣ ಮತ್ತು ತುಂಗಭದ್ರಾ ನದಿಗಳ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಕುಟುಂಬ ಸಮೇತ ತೆರಳಿದ ಜನರು ಪುಣ್ಯಸ್ನಾನ ಮಾಡಿದರು. ಕೃಷ್ಣೆ, ತುಂಗಭದ್ರಾ ನದಿಗಳಲ್ಲಿ ಜನರು ತಂಡೋಪತಂಡವಾಗಿ ಮಿಂದು, ದೇವರಿಗೆ ಪೂಜೆ ಸಲ್ಲಿಸಿದರು.
ಬಳಿಕ ನದಿ ದಡದಲ್ಲಿ ಜನರು ಕುಳಿತುಕೊಂಡು ಸಜ್ಜೆ ರೊಟ್ಟಿ, ಎಳ್ಳು, ಶೇಂಗಾದ ಹೋಳಿಗೆ, ಭರ್ತ (ತರಕಾರಿ ಖಾದ್ಯ), ಎಣ್ಣೆ ಬದನೆಕಾಯಿ, ಚಿತ್ರಾನ್ನ, ಮೊಸರನ್ನ ಸೇರಿದಂತೆ ಹಲವು ಬಗೆ ಬಗೆಯ ಭಕ್ಷ್ಯ ಖಾದ್ಯಗಳ ಬೋಜನ ಸವಿದರು.
ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ, ಧಾರ್ಮಿಕ ತಾಣಗಳಾದ ಗೂಗಲ್ ಪ್ರಭುಸ್ವಾಮಿ, ಕೃಷ್ಣಾ, ಕುರುವಪುರ, ನಾರದಗಡ್ಡೆ, ಎಲೆ ಬಿಚ್ಚಾಲಿ, ರಾಜಲಬಂಡಾ, ಮಂತ್ರಾಲಯ, ಕೊಪ್ಪರದ ಲಕ್ಷ್ಮಿನರಸಿಂಹ ಸ್ವಾಮಿ, ತಿಂಥಿಣಿ ಮೌನೇಶ್ವರ, ಗುರುಗುಂಟಾ ಅಮರೇಶ್ವರ, ನಾರದಗಡ್ಡೆ, ರಾಮಗಡ್ಡೆಗಳಿಗೆ ಜನರು ತೆರಳಿ ದೇವರ ದರ್ಶನವನ್ನು ಪಡೆದುಕೊಂಡರು.
ಹಬ್ಬದ ನಿಮಿತ್ತ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀರಾಯರ ಬೃಂದಾವನದ ದರ್ಶನ ಪಡೆದರು. ತುಂಗಭದ್ರಾ ನದಿ ಪಾತ್ರದ ಬಿಚ್ಚಾಲಿ, ಮಂತ್ರಾಲಯ, ಚೀಕಲಪರ್ವಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದರು.
ನಗರದ ನಂದೀಶ್ವರ ದೇವಸ್ಥಾನ, ಚಂದ್ರಮೌಳೇಶ್ವರ, ನಗರೇಶ್ವರ, ದೇವಸೂಗೂರಿನ ಸೂಗೂರೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಗ್ರಾಮೀಣ ಭಾಗದಲ್ಲೂ ಎತ್ತು ಓಡಿಸುವ, ಕಲ್ಲು ಎತ್ತುವ, ಉಸುಕಿನ ಚೀಲ ಹೊರುವ ಸ್ಪರ್ಧೆಯಂಥ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಂಕ್ರಾಂತಿ ಹಬ್ಬದ ವಿಶೇಷವೆಂದ ಮನೆ ಮುಂದೆ ಪಾಂಡವರ ಪ್ರತಿಷ್ಠಾಪನೆ ಹಾಗೂ ರಂಗೋಲಿ ಹಾಕಿ ಅಲಂಕರಿಸಿರುವುದು ಕಂಡು ಬಂದಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.