ರಾಯಚೂರು: ಮಹಿಳೆಯರಿಗೆ ಶಿಕ್ಷಣ ನೀಡಿದರೆ ಮಾತ್ರ ಸಮಾಜದ ಅಭ್ಯುದಯ ಸಾಧ್ಯ ಎನ್ನುವುದನ್ನು ಮನನ ಮಾಡಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಅವರು ಅವಮಾನ ಸಹಿಸಿ ಅಕ್ಷರ ನೀಡಿದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದಾರೆ. ಅವರ ಜೀವನ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಹೂಗಾರ ಜಿಲ್ಲಾ ಸಮುದಾಯದಿಂದ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿ ಬಾಯಿ ಪುಲೆ ಅವರ ಜನ್ಮ ದಿನಾಚರಣೆಯನ್ನು ನಿಮಿತ್ತ ಮಾತೆಯ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ನಮಿಸಿ ಮಾತನಾಡಿದರು.
ಮಹಿಳೆಯರಿಗೆ ಶಿಕ್ಷಣ ಎನ್ನುವುದು ಕನಸಿನ ಕೂಸು. ಸಾಮಾಜಿಕ ದ್ರೋಹ ಎನ್ನುವ ಕಾಲದಲ್ಲಿ ದೀನ, ದಲಿತ, ಶೋಷಣೆಗೊಳಗಾದ ಮಹಿಳೆಯರಲ್ಲಿ ಅಕ್ಷರದ ಜ್ಯೋತಿ ಬೆಳಗಿಸಿದ ಮಹಾತಾಯಿಯಾಗಿದ್ದಾರೆ ಎಂದರು.
ಜಿಲ್ಲೆಯಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಪಾಲಕರು ನೀಡಬೇಕಿದೆ. ಮಹಾತ್ವಾಕಾಂಕ್ಷೆ ಜಿಲ್ಲೆಯಾಗಿದ್ದರಿಂದ ಈಗಾಗಲೇ ಜಿಲ್ಲಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಎಸ್ಸಿ, ಎಸ್ಟಿ ಬಾಲಕಿಯರ ಶಿಕ್ಷಣಕ್ಕಾಗಿ ಪ್ರತ್ಯೇಕ ಸಮಗ್ರ ಶಿಕ್ಷಣ ಕೇಂದ್ರ ಸ್ಥಾಪಿಸಲು ಪತ್ರ ಬರೆದಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಸಿಇಒ, ಶಿಕ್ಷಣ ಇಲಾಖೆ, ಶಿಕ್ಷಕ ಸಮುದಾಯ ಶ್ರಮಿಸುತ್ತಿದೆ ಎಂದು ಹೇಳಿದರು.
ಜನ ಸೇವಾ ಶಿಕ್ಷಣ ಸಂಸ್ಥೆ ನಿರ್ದೇಶಕ ಸದಾನಂದ ಎಂ.ಪೂಜಾರ್ ಮಾತನಾಡಿ, ಎಲ್ಲ ಮಹಿಳೆಯರಿಗೆ ಅವರೇ ಮಾದರಿಯಾಗಬೇಕು. ಅವರ ಆಶಯ, ಆಸೆಗಳಿಗೆ ಎಲ್ಲರೂ ಶ್ರಮಿಸಬೇಕು ಎಂದು ಅವರ ಬದುಕು, ಬರಹ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಯೋಜನಾಧಿಕಾರಿ ಮಹೇಂದ್ರಕುಮಾರ್, ಕಾರ್ಯ ನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಶೆಟ್ಟಿ, ಸಿಬ್ಬಂದಿ ನಾಗರಾಜ್, ಮಲ್ಲೇಶ ರಾಂಪುರು, ಹೂಗಾರ ಸಮುದಾಯದ ಮುಖಂಡರಾದ ಬಸವರಾಜ ಹೂಗಾರ್, ವಿಜಯ್ ಹೂಗಾರ, ಈರಣ್ಣ ಹೂಗಾರ, ಉಪಾಧ್ಯಕ್ಷ ನರಸಣ್ಣ ಹೂಗಾರ ಇದ್ದರು.