ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿತೀರದಲ್ಲಿ ₹13 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸ್ನಾನಘಟ್ಟ ನಿರ್ಮಾಣಕ್ಕೆ ಯೋಜನೆ ಮಾಡಿಕೊಳ್ಳಲಾಗಿದ್ದು, ಒಂದು ವರ್ಷದೊಳಗಾಗಿ ಕಾಮಗಾರಿ ಪೂರ್ಣವಾಗಲಿದೆ ಎಂದು ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದರು.
ತುಂಗಭದ್ರಾ ಪುಷ್ಕರ ಪೂಜೆ ನೆರವೇರಿಸುವ ಪೂರ್ವ ನದಿ ತೀರದಲ್ಲಿ ನೀಡಿದ ಅನುಗ್ರಹ ಸಂದೇಶದಲ್ಲಿ ಉಲ್ಲೇಖಿಸಿದರು.
ಇನ್ಫೋಸಿಸ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ದಂಪತಿ ಆರ್ಥಿಕ ನೆರವು ಒದಗಿಸುತ್ತಿದ್ದಾರೆ ಎಂದರು.
ಪುಷ್ಕರದ ಆರಂಭದಲ್ಲಿಯೇ ಕಾಮಗಾರಿ ಪೂರ್ಣ ಮಾಡಲು ಉದ್ದೇಶಿಸಲಾಗಿತ್ತು. ಕೋವಿಡ್ ಇರುವ ಕಾರಣ ಕೆಲಸ ತಡೆಹಿಡಿಯಲಾಗಿದೆ. ಸುತ್ತಮುತ್ತ ಎಲ್ಲಿಯೂ ಕಾಣಸಿಗದ ವ್ಯವಸ್ಥಿತ ಸ್ನಾನಘಟ್ಟ ಇದಾಗಲಿದೆ ಎಂದು ತಿಳಿಸಿದರು.
ನಿಯಮಗಳಿಗೆ ಒಳಪಟ್ಟು ಎಲ್ಲರೂ ಪುಷ್ಕರ ಸ್ನಾನ ಮಾಡಿ ಪುಣೀತರಾಗಬೇಕು ಎಂದು ತಿಳಿಸಿದರು.