ಸಿರವಾರ (ರಾಯಚೂರು): ಅನವಶ್ಯಕವಾಗಿ ತಿರುಗಾಡುವ ಜನರನ್ನು ನಿಯಂತ್ರಿಸುವ ಸಲುವಾಗಿ ಶಿಕ್ಷಕರ ಪಡೆಯನ್ನು ಚೆಕ್ ಪೋಸ್ಟ್ಗಳಲ್ಲಿ ತಾಲ್ಲೂಕು ಆಡಳಿತ ನಿಯೋಜಿಸಿದೆ.
ಪ್ರಮುಖ ವಾರ್ಡ್ಗಳ ಮುಂಭಾಗದಲ್ಲಿ 18 ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಅನವಶ್ಯಕವಾಗಿ ತಿರುಗುವ ಜನರನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದ್ದು, ತಾಲ್ಲೂಕಿನ ಸರ್ಕಾರಿ ಶಾಲೆಗಳ 54 ಶಿಕ್ಷಕರನ್ನು ನೇಮಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಒಂದು ಚೆಕ್ ಪೋಸ್ಟ್ನಲ್ಲಿ ಬೆಳಿಗ್ಗೆ 7 ಗಂಟೆಯಿಂದ 11.40 ರವರಗೆ ಮಧ್ಯಾಹ್ನ 11.40 ರಿಂದ 4.20 ರವರೆಗೆ ಮತ್ತು 4.20 ರಿಂದ ರಾತ್ರಿ 9 ಗಂಟೆಯವರೆಗೆ ಪಾಳಿ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸಲು ಮೂರು ಜನ ಶಿಕ್ಷಕರು ನೇಮಿಸಲಾಗಿದೆ.
ರಜಾ ಮೂಡ್ ನಲ್ಲಿದ್ದ ಶಿಕ್ಷಕರಿಗೆ ನಿರಾಶೆ: ಪ್ರತಿ ವರ್ಷವೂ ಬೇಸಿಗೆ ರಜೆಯಲ್ಲಿ ಒಂದಿಲ್ಲ ಒಂದು ಕೆಲಸ ಮಾಡಲು ಆದೇಶ ನೀಡುತ್ತಿದ್ದ ಶಿಕ್ಷಣ ಇಲಾಖೆಯು ಈ ಬಾರಿ ಕೋವಿಡ್ -19ಗೆ ಯಾವುದೇ ಪ್ರಮುಖ ಕೆಲಸಗಳನ್ನು ನೀಡದೇ ಶಿಕ್ಷಕರಿಗೆ ರಜೆ ನೀಡಿತ್ತು. ಪರೀಕ್ಷೆಗಳ ಮುಂದೂಡಿಕೆ, ಪರೀಕ್ಷೆಗಳ ರದ್ಧತಿ ಸೇರಿದಂತೆ ಇಲಾಖೆ ಕೆಲಸದಿಂದ ದೂರವಿದ್ದ ಶಿಕ್ಷಕರಿಗೆ ನಿರಾಶೆಯಾಗಿದೆ.
'ಪೊಲೀಸ್ ಇಲಾಖೆ ಸೂಚನೆಯಂತೆ ವಾರ್ಡಗಳ ಮುಂಭಾಗದಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿದ್ದು, ಸ್ಥಳಗಳಲ್ಲಿ ಪೊಲೀಸರಿಗೆ ಸಹಕಾರಿಯಾಗಲು ಜಿಲ್ಲಾಧಿಕಾರಿಗಳ ಆದೇಶದಂತೆ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದ ಜನರ ಅನವಶ್ಯಕ ಓಡಾಟವನ್ನು ನಿಯಂತ್ರಿಸಬಹುದು' ಎಂದುತಹಶೀಲ್ದಾರ್ ಶ್ರುತಿ ತಹಶೀಲ್ದಾರ್ ಹೇಳಿದರು.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಕಾರ್ಯ ನಿರ್ವಹಿಸಲು ಸನ್ನದ್ಧರಿದ್ದು. ಆದರೆ, ಇಲ್ಲಿನ ಜನರು ಪೊಲೀಸರ ಲಾಠಿಗೆ ಅಂಜುವುದಿಲ್ಲ, ನಮ್ಮಂತ ಶಿಕ್ಷಕರಿಗೆ ಹೇಗೆ ಹೆದರುತ್ತಾರೆ. ಶಿಕ್ಷಕರ ಜೊತೆಗೆ ಒಬ್ಬ ಹೋಂಗಾರ್ಡ ನೇಮಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳಿದರು.