ಸಿಂಧನೂರು: ತಾಲ್ಲೂಕಿನ ಮಾವಿನಮಡು ಗ್ರಾಮದಲ್ಲಿ 2015ರ ಜೂನ್ 18 ರಂದು ಪಾಷಾ ಪಟೇಲ್ ಎಂಬುವರ ಜಮೀನಿನ ಕೃಷಿ ಹೊಂಡದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬಿ.ಬಿ.ಜಕಾತೆ ಬಿಡುಗಡೆಗೊಳಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಘಟನೆಯ ವಿವರ: ಪಾಷಾ ಪಟೇಲ್ ಅವರು ತಮ್ಮ ಜಮೀನಿನ ಹೊಂಡದಲ್ಲಿ ಮಾನವನ ಅಸ್ತಿ ಪಂಜರ ತೇಲಾಡುತ್ತಿರುವುದನ್ನು 2015ರ ಜೂನ್ 18ರಂದು ಗಮನಿಸಿ ಸಿಂಧನೂರು ಗ್ರಾಮೀಣ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಂದಿನ ಸಿಪಿಐ ರಮೇಶ ರೊಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಪಕ್ಕದಲ್ಲಿಯೇ ದೊರೆತ ನೆಹರು ಶರ್ಟ್ ಪರಿಶೀಲಿಸಿದಾಗ ಮಸ್ಕಿಯ ಭವಾನಿ ಟೇಲರ್ ಸ್ಟಿಕ್ಕರ್ ಸಿಕ್ಕಿದ್ದರಿಂದ ಟೇಲರ್ ಮಲ್ಲಯ್ಯ ಅವರನ್ನು ವಿಚಾರಣೆ ನಡೆಸಿದ್ದರು. ಜಂಗಮರಹಳ್ಳಿ ಗ್ರಾಮದ ಗೌಡಪ್ಪ ಮಾಲಿಪಾಟೀಲ ಎಂಬುವರಿಗೆ ತಾವೇ ಶರ್ಟ್ ಹೊಲಿದು ಕೊಟ್ಟಿದ್ದಾಗಿ ಅವರು ಹೇಳಿದ್ದರು.
ಈ ಆಧಾರದ ಮೇಲೆ ಜಂಗಮರಹಳ್ಳಿ ಗ್ರಾಮಕ್ಕೆ ತೆರಳಿ ಮೃತ ಗೌಡಪ್ಪನ ಕುರಿತು ಮಗ ಬಸವರಾಜನನ್ನು ವಿಚಾರಣೆಗೆ ಒಳಪಡಿಸಿದರು. ಕೊಲೆಯಾದ ಗೌಡಪ್ಪನಿಗೆ ಎಚ್ಐವಿ ಇತ್ತು. ಆತ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಬಾಯಿಯಿಂದ ಕಚ್ಚಿ ರೋಗ ಹರಡಿಸುತ್ತೇನೆ ಎಂದು ಆಗಾಗ ಬೆದರಿಸುತ್ತಿದ್ದ. ಇದರಿಂದ ಬೇಸತ್ತ ಮಗ ಬಸವರಾಜ ಮತ್ತು ಆತನ ಇಬ್ಬರು ಸ್ನೇಹಿತರಾದ ಚಂದ್ರಶೇಖರ, ಗೌಡಪ್ಪಗೌಡ ಒಳಸಂಚು ಮಾಡಿ ಗೌಡಪ್ಪನನ್ನು ಮಾವಿನಮಡುವಿಗೆ ಕರೆತಂದು ಕೃಷಿ ಹೊಂಡದ ನೀರಿನಲ್ಲಿ ಕಲ್ಲುಕಟ್ಟಿ ಹಾಕಿ ಕೊಲೆ ಮಾಡಿದ್ದರು. ಈ ಕುರಿತು ಸಿಪಿಐ ರಮೇಶ ರೊಟ್ಟಿ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿ ನ್ಯಾಯಾಲಯ ಸಾಕ್ಷಾಧಾರಗಳನ್ನು ಪರಿಶೀಲಿಸಿ ವಾದ-ಪ್ರತಿವಾದಗಳ ನಂತರ ಮೂವರು ಆರೋಪಿಗಳನ್ನು ಬುಧುವಾರ ಖುಲಾಸೆ ಮಾಡಿತು. ಆರೋಪಿಗಳ ಪರ ವಕೀಲ ಶಶಿಧರಗೌಡ ಕೆಲ್ಲೂರ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.