ಶಕ್ತಿನಗರ: ದೇವಸೂಗೂರು ಮತ್ತು ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಶಾಖವಾದಿ, ಡಿ.ಯದ್ಲಾಪುರ, ಜೇಗರಕಲ್, ಮನ್ಸಲಾಪುರ, ಸಗಮಕುಂಟ, ಚಿಕ್ಕಸೂಗೂರು, ಕಾಡ್ಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಕೆರೆಗಳ ಹೂಳೆತ್ತುವುದು, ಅರಣ್ಯದಲ್ಲಿ ಟ್ರೆಂಚ್ ನಿರ್ಮಾಣ ಕಾಮಗಾರಿಗಳು ನಡೆದಿವೆ.
2021–22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಏಪ್ರಿಲ್ ತಿಂಗಳ ಎನ್ಎಂಆರ್ ತೆಗೆದು ಬೇಡಿಕೆಗೆ ಅನುಗುಣವಾಗಿ ಮಾನವ ದಿನಗಳ ಸೃಜನೆ ಮಾಡಬೇಕು ಎಂದು ಸೂಚಿಸಲಾಗಿತ್ತು.
ಎಂಐಎಸ್ನ ವರದಿಯಲ್ಲಿ ನಿಗದಿತ ಅವಧಿಯೊಳಗೆ ಮಾನವ ದಿನಗಳ ಸೃಜನೆ ಮಾಡದಿರುವುದು ಕಂಡು ಬಂದಿರುವುದರಿಂದ, ಕೆಲ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಅಸಮಾಧಾನ ವ್ಯಕ್ತಪಡಿಸಿದೆ.
ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸದೇ ಇರುವುದರಿಂದ ರಾಯಚೂರು ಜಿಲ್ಲೆಯು ಪ್ರಗತಿಯಲ್ಲಿ 16ನೇ ಸ್ಥಾನದಲ್ಲಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಗತಿ ಸಾಧಿಸುವಲ್ಲಿ ವಿಫಲವಾಗಿರುವುದರಿಂದ ಸರ್ಕಾರ ಮಟ್ಟದಲ್ಲಿ ಮುಜುಗರ ಉಂಟಾಗುತ್ತಿದೆ.
ಈಗಾಗಲೇ ವಿಡಿಯೋ ಸಂವಾದ, ವಾಟ್ಸ್ಆ್ಯಪ್ ಮೂಲಕ ತಿಳಿಸಿದ್ದಾಗ್ಯೂ ಇವರೆಗೂ ನಿಗದಿತ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದ್ದು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆದ್ಯತೆ ಮೇರೆಗೆ ನಿಗದಿತ ಅವಧಿಯೊಳಗೆ ಮಾನವ ದಿನಗಳನ್ನು ಸೃಜಿಸಿ ಪ್ರಗತಿ ಸಾಧಿಸಲು ಜಿಲ್ಲಾಡಳಿತ ಸೂಚಿಸಿದೆ. ಪ್ರಗತಿ ಸಾಧಿಸದೇ ಇದ್ದಲ್ಲಿ ಅಂತಹ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.