ರಾಯಚೂರು: ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಶಾಂತಿಯುತವಾಗಿ ಹೋರಾಟ ನಡೆಸುವ ಮುಂಚೂಣಿ ನಾಯಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಭಾರತ ಕಮ್ಯೂನಿಷ್ಟ ಪಕ್ಷ(ಮಾರ್ಕ್ಸ್ ವಾದಿ) ಜಿಲ್ಲಾ ಘಟಕ ಪಾಧಿಕಾರಿಗಳು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರ ಪ್ರತಿಕೃತಿ ದಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದ ಮೇರೆಗೆಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿತಾರಾಂ ಯೆಚೂರಿ, ಡಾ. ಜಯತಿ ಘೊಷ್, ಯೋಗೇಂದ್ರ ಯಾದವ್ ರಾಹುಲ್ ರಾಯ್ ಸೇರಿದಂತೆ ಹಲವಾರು ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರ ವ್ಯಕ್ತಿತ್ವ ತೇಜೋವಧೆಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಕೂಡಲೇ ಶಾಂತಿಯುತ ರಾಜಕೀಯ ಪ್ರತಿಭಟನೆಗಳನ್ನು ಕ್ರಿಮಿನಲ್ ಅಪರಾಧ ಎಂದು ಬಿಂಬಿಸುವ ಸಂವಿಧಾನ ವಿರೋಧಿ ನಿಲುವು ಕೂಡಲೇ ನಿಲ್ಲಿಸಬೇಕು. ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಕಳುಹಿಸಲಾಗಿರುವ ಎಲ್ಲಾ ರಾಜಕೀಯ ಖೈದಿಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರಾದ ಕೆ.ಜಿ.ವೀರೇಶ್, ಎಚ್.ಪದ್ಮಾ,ಶೇಕ್ಷಾಖಾದ್ರಿ, ಡಿ.ಎಸ್.ಶರಣಬಸವ, ವರಲಕ್ಷ್ಮೀ, ರಂಗನಗೌಡ, ಅಮರೇಶ ಇದ್ದರು.