ರಾಯಚೂರು: ರೈತ ವಿರೋಧಿ ಎಪಿಎಂಸಿ 2017ರ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಕಾರಿಗಳಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರೈತ ದೇಶದ ಬೆನ್ನೆಲುಬು, ರೈತರ ಹಿತ ಕಾಪಾಡುವುದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮುಖ್ಯ ಕೆಲಸ. ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರೆಯಬೇಕು. ಸರಿಯಾದ ತೂಕ ಮಾಡಿ ಮಧ್ಯವರ್ತಿಗಳ ಹಾವಳಿ ಇರಬಾರದು ಎಂಬ ಉದ್ದೇಶದಿಂದ ಎಪಿಎಂಸಿ ಮಾರುಕಟ್ಟೆ ಒದಗಿಸಲಾಗಿದೆ. ಅದಕ್ಕೆ ಸೂಕ್ತ ತಿದ್ದುಪಡಿ ತಂದು ರೈತರಿಗೆ ಸಕಲ ಅನುಕೂಲ ಒದಗಿಸಲು 2017ರ ಕಾಯ್ದೆ ಜಾರಿ ಮಾಡಲಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಮತ್ತು ಎಂಎನ್ಸಿ ಗಳಿಗೆ ಮಣೆ ಹಾಕಲು ಈ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದ್ದು ಖಂಡನೀಯ ಎಂದು ತಿಳಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಉಮಾದೇವಿ ನಾಯಕ್, ರಾಮಯ್ಯ ಜವಳಗೇರಾ, ಸಿ.ಎಚ್ ರವಿ, ತಿಮ್ಮಪ್ಪ ಭೋವಿ, ಕೆ.ವೈ ಬಸವರಾಜ್ ನಾಯಕ್, ಶಿವರಾಜ್ ಮರಲ್ದಿನ್ನಿ ಇದ್ದರು.