ರಾಯಚೂರು: ಎಲ್ಲರೂ ಎಚ್ಚೆತ್ತು ಪರಿಸರವನ್ನು ರಕ್ಷಿಸಿ ಪ್ರಾಣಿ - ಪಕ್ಷಿಗಳ ಸಂತತಿಯನ್ನು ಉಳಿಸಬೇಕಾಗಿದೆ ಎಂದು ಪಕ್ಷಿ ಪ್ರೇಮಿ ಸಲ್ಲಾವುದ್ದೀನ್ ಹೇಳಿದರು.
ತಾಲ್ಲೂಕಿನ ದಿನ್ನಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಗುಬ್ಬಚ್ಚಿಗಳ ಹಾಗೂ ವಿಶ್ವ ಅರಣ್ಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿಗೂ ಬದಕುವ ಹಕ್ಕಿದೆ. ಆದರೆ ಮಾನವನ ದುರಾಸೆಯಿಂದ ಪರಿಸರ ನಾಶ ವಾಗುತ್ತಿದೆ. ಪ್ರತಿಯೊಬ್ಬ ಮನುಷ್ಯನು ಉಸಿರಾಡಬೇಕಾದರೆ ಪ್ರತಿಯೊಬ್ಬರಿಗೆ ಏಳು ಗಿಡಗಳ ಆಮ್ಲಜನಕದ ಅವಶ್ಯಕತೆ ಇದೆ. ಅದಕ್ಕಾಗಿ ಪ್ರತಿಯೊಬ್ಬರು ಹೆಚ್ಚಾಗಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಹೇಳಿದರು.
ವ್ಯಂಗ್ಯ ಚಿತ್ರ ಬರಹಗಾರ ಈರಣ್ಣ ಬೆಂಗಾಲಿ ಮಾತನಾಡಿ, ಮನುಷ್ಯನು ಸತತವಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಿರುವುದರಿಂದಲೇ ಇಂದು ಮಹಾಮಾರಿ ಕೊರೊನಾದಂತಹ ವೈರಸ್ ಬಂದು ಇಡೀ ಜಗತ್ತನ್ನೆ ಅಲ್ಲೋಲ ಕಲ್ಲೋಲ ಮಾಡಿದೆ. ಇಂದು ಮನುಷ್ಯನಿಗೆ ಸ್ವಚ್ಛಂದ ಪ್ರಕೃತಿ ಬೇಕಾಗಿದೆ. ಆದರೆ ಪ್ರಕೃತಿಗೆ ಮನುಷ್ಯ ಬೇಡವಾಗಿದ್ದಾನೆ. ಮನುಷ್ಯನು ಮಾಡಿರುವ ಘೋರ ಕೃತ್ಯದಿಂದ ಪ್ರಕೃತಿಗೆ ಮುಖ ತೋರಿಸದಂತೆ ಇಂದು ಮಾಸ್ಕ್ ಹಾಕುತ್ತಿದ್ದೇವೆ ಎಂದರು.
ಶಾಲೆಯ ಮುಖ್ಯಗುರು ಕೃಷ್ಣ ಕುರ್ಡಿಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರದ ಕಾಳಜಿವಹಿಸಿ ಉತ್ತಮ ಪರಿಸರ ಉಳಿವಿಗೆ ಎಲ್ಲರೂ ಕೈಜೋಡಿಸುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಪ್ರೌಢ ಶಾಲೆಯ ಪ್ರಭಾರಿ ಗುರುಮಾತೆ ರಶ್ಮಿ , ಹಿರಿಯ ಛಾಯಾಗ್ರಾಹಕ ಜಗನ್ನಾಥ ಚೌಧರಿ ಮಾನ್ವಿ, ಶಿಕ್ಷಕರುಗಳಾದ ರಮೇಶ ರಾಠೋಡ, ಸುಧಾ ಮೂಲಿಮನಿ, ಸವಿತಾ ಎಂ. ಇದ್ದರು.
ವೈಶಾಲಿ ಪಾಟೀಲ ಮಾತನಾಡಿದರು. ಇಕೋ ಕ್ಲಬ್ ನ ಉಸ್ತವಾರಿ ಶಿಕ್ಷಕ ರಾವುತರಾವ್ ಬರೂರ ಸ್ವಾಗತಿಸಿದರು. ಅಶೋಕ ಕುಮಾರ್ ಪಾಟೀಲ ವಂದಿಸಿದರು. ರವಿಶ ಬಿ.ಕೆ. ನಿರೂಪಿಸಿದರು.