ಸಿಂಧನೂರು: ತಾಲ್ಲೂಕಿನ ಗೊರೇಬಾಳ ಪಿಕ್ಅಪ್ ಡ್ಯಾಂ ಗೆ ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಪರಿಹಾರ ಕೊಡದ ಸ್ಥಳೀಯ ನಂ.3 ಕಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಾರ್ಯಾಲಯಕ್ಕೆ ಧಾವಿಸಿದ ಸ್ಥಳೀಯ ಹಿರಿಯ ಶ್ರೇಣಿ ನ್ಯಾಯಾಲಯದ ಸಿಬ್ಬಂದಿ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಯಿತು.
ಗುರುವಾರ ಮಧ್ಯಾಹ್ನ 1.30ಗಂಟೆ ಸುಮಾರಿಗೆ ನೀರಾವರಿ ಇಲಾಖೆ ಕಚೇರಿಗೆ ತೆರಳಿದ ನ್ಯಾಯಾಲಯದ ಸಿಬ್ಬಂದಿ ಮೂರು ಸಿಪಿಯು, ಎರಡು ಮಾನಿಟರ್, ಎರಡು ಪ್ರಿಂಟರ್, ಫ್ಯಾನ್, ಝೆರಾಕ್ಸ್, ಫ್ಯಾಕ್ಸ್ ಮಷೀನ್, ಖುರ್ಚಿ, ಮೇಜು, ಯುಪಿಎಸ್ ಮತ್ತಿತರ ವಸ್ತುಗಳನ್ನು ಕಾರ್ಯಪಾಲಕ ಎಂಜಿನಿಯರ್ ಮುಲ್ಲಾ ಅವರ ಸಮಕ್ಷಮದಲ್ಲಿಯೇ ಜಪ್ತಿ ಮಾಡಿತು.
ಗೊರೇಬಾಳ ಪಿಕ್ಅಪ್ ಡ್ಯಾಂ ನಿರ್ಮಾಣಕ್ಕೆ 2000ರಲ್ಲಿ ಭೂಮಿಯನ್ನು ವಿರೂಪಾಕ್ಷಪ್ಪ ಮತ್ತು ಉಮಾದೇವಿ ಎನ್ನುವ ರೈತರ 3ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ನೀರಾವರಿ ಇಲಾಖೆ 2006ರಲ್ಲಿ 9ಲಕ್ಷ ಹಣ ನೀಡಿದೆ.
ಇನ್ನುಳಿದ ಬಾಕಿ 12,71.152 ₨ ಹಣ ನೀಡಬೇಕಾಗಿತ್ತು. ನ್ಯಾಯಾಲಯದಿಂದ ಹಲವಾರು ಬಾರಿ ರೈತರ ಪರ ವಕೀಲ ವೀರೇಶ ಪನ್ನೂರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿಕೊಂಡಿದ್ದರು. ಫಲಕಾರಿಯಾಗದ ಹಿನ್ನೆಲೆಯಲ್ಲಿ ರೈತರಿಗೆ ನೀಡಬೇಕಾದ ಪರಿಹಾರದ ಹಣಕ್ಕಾಗಿ ನೀರಾವರಿ ಇಲಾಖೆ ಆಸ್ತಿ ಜಪ್ತಿ ಮಾಡಲು ಅಕ್ಟೋಬರ್ 10, 2013ರಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಶಶಿಧರ ಅವರಿಂದ ಆಸ್ತಿ ಜಪ್ತಿಗೆ ಆದೇಶ ಪಡೆದಿದ್ದರು.
ನ್ಯಾಯಾಲಯದ ಸಿಬ್ಬಂದಿ ಇಲಾಖೆ ಆಸ್ತಿಯನ್ನು ಜಪ್ತಿ ಮಾಡುವ ಸಂದರ್ಭದಲ್ಲಿ ವ್ಯವಸ್ಥಾಪಕ ಖಾಜಾಮೊಹಿನುದ್ದೀನ್, ಭೂಸ್ವಾಧೀನ ಗುಮಾಸ್ತ , ಸಿಬ್ಬಂದಿ ಮತ್ತಿತರರು ಇದ್ದರು.