ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಇ ಅದಾಲತ್, 1290 ಪ್ರಕರಣಗಳು ಇತ್ಯರ್ಥ

ಜಿಲ್ಲೆಯ 18 ನ್ಯಾಯಪೀಠಗಳಲ್ಲಿ ನಡೆದ ಇ- ಲೋಕ ಅದಾಲತ್‌
Last Updated 23 ಸೆಪ್ಟೆಂಬರ್ 2020, 4:14 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ಒಟ್ಟು 1290 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಬಿ. ಜಿ. ರಮಾ ತಿಳಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಮನಗರ ಜಿಲ್ಲೆಯಾದ್ಯಂತ ಇರುವ 18 ನ್ಯಾಯಪೀಠಗಳಲ್ಲಿ ಇದೇ 19ರಂದು ಮೆಗಾ ಇ-ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಕೋವಿಡ್ -19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಲೋಕ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ನ್ಯಾಯದೊರಕಿಸಿ ಕೊಡುವ ಉದ್ದೇಶದಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ಆನ್‌ಲೈನ್ ಮೂಲಕ ಸಣ್ಣ ಪುಟ್ಟ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಮಿನಲ್ ಪ್ರಕರಣಗಳೇ ಹೆಚ್ಚು: ಮೆಗಾ ಇ-ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಿದ 1290 ಪ್ರಕರಣಗಳ ಪೈಕಿ 982 ಪ್ರಕರಣಗಳು ಕ್ರಿಮಿನಲ್ ಪ್ರಕರಣಗಳಾಗಿವೆ. 140 ಕ್ರಿಮಿನಲ್ ಕಾಂಪೌಡಬಲ್ ಪ್ರಕರಣಗಳಾಗಿದ್ದರೆ, 70 ಸಿವಿಲ್, 46 ವ್ಯಾಜ್ಯ ಪೂರ್ವ, 44 ಅಪಘಾತ ಪರಿಹಾರ, ನೆಗೋಷಿಯಬಲ್ ಆಕ್ಟ್ ನ 30 ಪ್ರಕರಣಗಳು, 6 ಬ್ಯಾಂಕ್ ನ ಹಣ ವಸೂಲಾತಿ ಪ್ರಕರಣ, 2 ಕೈಗಾರಿಕಾ ವಿವಾದದ ಪ್ರಕರಣಗಳು ಸೇರಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 39,686 ಪ್ರಕರಣಗಳು ಬಾಕಿ ಇದ್ದು, ಇವುಗಳ ಪೈಕಿ 4,384 ಪ್ರಕರಣಗಳು ಹಾಗೂ ಇ-ಲೋಕ ಅದಾಲತ್‌ಗಾಗಿ ನೊಂದಣಿ ಮಾಡಿಸಿಕೊಂಡಿದ್ದ ಪ್ರಕರಣಗಳನ್ನು ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

ರಾಮನಗರ ಜಿಲ್ಲಾ ಹಾಗೂ ಎಲ್ಲಾ 18 ಅಧೀನ ನ್ಯಾಯಾಲಯಗಳಲ್ಲಿ ಆನ್‌ಲೈನ್ ಮೂಲಕವೇ ಈ ಕಲಾಪವು ನಡೆದಿದ್ದು ವಿಶೇಷವಾಗಿತ್ತು. ನ್ಯಾಯಾಲಯದ ಕಲಾಪಗಳಲ್ಲಿ ವಕೀಲರು ಖುದ್ದಾಗಿ ಭಾಗವಹಿಸಿದ್ದರೆ, ಇನ್ನು ಕೆಲವರು ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಅವಶ್ಯಕತೆ ಇದ್ದಂತಹ ಪ್ರಕರಣಗಳಲ್ಲಿ ಕಕ್ಷಿದಾರರನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT