ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಅಚ್ಚರಿಗಳ ತಾಣ ಅಚ್ಚಲು ದುರ್ಗ

ಕೋಟೆ ಅವಶೇಷಗಳ ಒಡಲು; ಇಲ್ಲಿವೆ ಪ್ರಾಚೀನ ಇತಿಹಾಸದ ಕುರುಹು
Last Updated 10 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ರಾಮನಗರ: ನಗರದಿಂದ ಆಗ್ನೇಯಕ್ಕೆ 3 ಕಿ.ಮೀ ದೂರದಲ್ಲಿ, ಚನ್ನಮಾನಹಳ್ಳಿಯಿಂದ 1.5 ಕಿ.ಮೀಟರ್ ದೂರದಲ್ಲಿ ಇರುವ ಅಚ್ಚಲು ದುರ್ಗ ಬೆಟ್ಟವು ತನ್ನ ಭೀಮಾಕೃತಿಯ ಸೌಂದರ್ಯದಿಂದ ಗಮನ ಸೆಳೆಯುವ ಪ್ರಕೃತಿಯ ನೆಲೆಯಾಗಿದೆ.

ರಾಮನಗರ– -ಕನಕಪುರ ರಸ್ತೆಯ ಸುಮಾರು ದೂರದುದ್ದಕ್ಕೆ ಬಲದಲ್ಲಿ ಎದ್ದು ಕಾಣುತ್ತದೆ ಅಚ್ಚಲುದುರ್ಗ. ಈ ಬೆಟ್ಟವು ಭೀಮಾಕೃತಿಯ ಡೈನೋಸಾರ್ಸ್ ಮೃಗದಂತೆ, ದೈತ್ಯ ಮನಸ್ಸಿನ ಅರ್ಧಾವೃತ್ತಕಾರದ ತಟ್ಟೆಯಂತೆ ವಿವಿಧ ಕೋನಗಳ ನೋಟದಲ್ಲಿ ಹಾಗೂ ಕಿರುಬೆಟ್ಟಗಳ ನಡುವೆ ಸೈಂಧವನಂತೆ ಎದ್ದು ಕಾಣುತ್ತದೆ. ‘ಬಸಿರಿಯರು ಸತ್ತಾಗ ಹೂಳದೇ ದೇಹವನ್ನು ಈ ಗುಡ್ಡದ ಮೇಲೆ ತಂದು ಕಲ್ಲಿಗೆ ಒರಿಗಿಸಿಟ್ಟು ಹೋಗುತ್ತಿದ್ದ ಪದ್ಧತಿ ಇತ್ತು. ಒಂದು ರೀತಿ ಬೃಹತ್‌ ಶಿಲಾಯುಗದ ಪದ್ಧತಿಯ ಪ್ರತೀಕವೇ ಇದು’ ಎಂದು ಬೆಟ್ಟದ ಇತಿಹಾಸದ ಕುರಿತು ವಿವರಿಸುತ್ತಾರೆ ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್.

ಚನ್ನಮಾನಹಳ್ಳಿಯಿಂದ ದುರ್ಗದ ಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ಬಸವನಕಲ್ಲು, ಮೂರು ಕಲ್ಲು, ಮೂಗಣ್ಣನ ಗುಡಿ ಕಂಡುಬರುತ್ತವೆ. ಅಲ್ಲಿಂದ ಮುಂದೆ ಕೆರೆ, ದನಗಳ ಮೈ ತಿಕ್ಕುವ ಕಲ್ಲಿನ ಕಂಬ ಸಿಗುತ್ತವೆ. ಅದರ ಪೂರ್ವಕ್ಕೆ ಬಸವನಕಲ್ಲು-ಕಟ್ಟೆ. ಇಲ್ಲಿಂದ ಬೆಟ್ಟಕ್ಕೆ ಹತ್ತಬೇಕು. ಗುಡ್ಡೆ ಹತ್ತಿದರೆ ಅಚ್ಚಲು ದುರ್ಗದ ಬುಡ ಕಾಣುತ್ತದೆ. 25-–30 ಅಡಿ ವಾಲಿಕೊಂಡು 100 ಗಜದಷ್ಟು ಮೇಲಕ್ಕೆ ಹತ್ತಿದರೆ ದುರ್ಗದ ಮೆಟ್ಟಿಲುಗಳು ಸಿಗುತ್ತವೆ. ಅಲ್ಲಿಂದ 40 ಮೆಟ್ಟಿಲುಗಳನ್ನು ಹತ್ತಿದ ಮೇಲೆ 20 ಅಡಿ ದೂರದಲ್ಲಿ ಮೊದಲ ಕೋಟೆಯ ಅವಶೇಷಗಳು ಕಾಣಸಿಗುತ್ತವೆ.

ಮತ್ತೆ 150 ಅಡಿ ಸಾಗಿದರೆ ಜಾಲಮಂಗಲದವರೆಗಿನ ಎಲ್ಲಾ ಬೆಟ್ಟಗಳ ಶ್ರೇಣಿ, ಸುತ್ತಲಿನ ಬೆಟ್ಟಗಳು ಎದ್ದು ಕಾಣುತ್ತವೆ. ಹಂದಿಗುಂದಿ ಬೆಟ್ಟ, ಸಿಡಿಲಕಲ್ಲು, ನೀರು ಮಾವಿನಕಲ್ಲು, ರಾಮದೇವರ ಬೆಟ್ಟ, ಕೋಣನಹಲ್ಲು, ಜಲಸಿದ್ದೇಶ್ವರ ಬೆಟ್ಟ, ಚೆಲುವರಾಯಸ್ವಾಮಿ ಬೆಟ್ಟ, ಐಜೂರು ಗುಡ್ಡಗಳು, ಗಳಗ್ಗಲ್ಲು (ಕೂಟಗಲ್ಲು), ಸಾವನದುರ್ಗ, ಜಾಲಮಂಗಲದ ಲಕ್ಷ್ಮೀನಾರಾಯಣಸ್ವಾಮಿ ಬೆಟ್ಟ (ಅಣ್ಣಪ್ಪನ ದುರ್ಗ), ಕ್ಯಾಸಾಪುರದ ಬೆಟ್ಟ (ನಂದಗಿರಿ), ಕರಡಿಗುಂಡು. ದುರ್ಗದ ಪಶ್ಚಿಮಕ್ಕೆ ಬಸವನಕಲ್ಲು, ಹದ್ದಿನ ಕಲ್ಲು, ದಕ್ಷಿಣಕ್ಕೆ ಕರಡಿ ಕಲ್ಲು, ಅಗಸನ ಕಲ್ಲು ಗುಡ್ಡೆ ಇವುಗಳ ಶಿಲಾ ವೈಭವದ ದೃಶ್ಯ ಕಂಡುಬರುತ್ತದೆ.

ನಂತರ ಕಾಣುವ ಸ್ಥಳದಿಂದ 15–-20 ಅಡಿ ಇಳಿಜಾರಿನ ಉನ್ನತಕೋನ ನೆಲೆಯನ್ನು ಏರಿಹೋದರೆ ಸಮತಟ್ಟಾದ ಬಂಡೆಯಿದೆ. ಸುಮಾರು 200 ಅಡಿ ವಿಸ್ತಾರದ ಏಕಶಿಲೆಯಿದು. ಈ ಬಂಡೆಯ ಭಾಗದಷ್ಟಕ್ಕೆ ಬೆಟ್ಟದ ಎರಡನೇ ಭಾಗ ಮುಗಿಯುತ್ತದೆ. ಮುಂದೆ ಮೂರನೆ ಭಾಗಕ್ಕೆ ಸುಮಾರು 70 ಡಿಗ್ರಿ ಉನ್ನತಕೋನದಲ್ಲಿ ಮೆಟ್ಟಲು ಹತ್ತಿ ಏರಬೇಕು. ಎಡಪಾರ್ಶ್ವಕ್ಕೆ ವಿಶಾಲವಾದ ಸೀಳುಬಂಡೆ ಅಂದರೆ ಬೆಟ್ಟದ ಮುಖ್ಯ ಮೈಗೂ, ಪಾರ್ಶ್ವದ ಭೀಮಬಂಡೆಗೂ ನಡುವೆ ಸುಮಾರು ಆರು ಅಡಿ ಜಾಗೆಯ ಬೃಹತ್ ಕಿಂಡಿ ಇದೆ.

ಅದರಲ್ಲಿ ಸಿಕ್ಕಿಕೊಂಡಿರುವ ತುಂಬು ಬಂಡೆ ಎರಡಕ್ಕೂ ಸಂಪರ್ಕ ಸೇತು. ಈ ಭಾಗ ಡೈನೋಸಾರಸ್ ಮೃಗದ ಬಾಲದಂತಿದ್ದು, ಮೇಲಿನ ಭಾಗ ಅದರ ಬೆನ್ನಿನ ಭಾಗದಂತೆ ಕಾಣುವ ರೋಚಕ ದೃಶ್ಯವಿದೆ. ಮುಂದೆ 25 ಮೆಟ್ಟಿಲುಗಳನ್ನೇರಬೇಕು. ಏರಲು ಕಿರು ಕೈ ಮೆಟ್ಟಿಲುಗಳೂ ಇವೆ. 25 ಮೆಟ್ಟಿಲುಗಳನ್ನು ಹತ್ತಿ ತುದಿ ತಲುಪಿದರೆ ಬಾಗಿಲುಗಳ ತಳದ ಹೆಜ್ಜೆ (ಗುಳಿಗಳು) ಕಂಡುಬರುತ್ತವೆ. ನಾಲ್ಕು ಹೆಜ್ಜೆಗಳಿದ್ದು, ಅರ್ಧ ಅಡಿ ಆಳದ ಅರ್ಧ ಅಡಿ ಚೌಕದವಾಗಿದ್ದು, ದಿಡ್ಡಿ ಬಾಗಿಲ ಅವಶೇಷದ ಕುರುಹಾಗಿ ಕಾಣುತ್ತವೆ.

ಈ ಬಾಗಿಲ ನೆಲೆಯಿಂದ ಮೇಲೆರಿದರೆ 30 ಅಡಿ ಮುಂದೆ ಕೋಟೆಯೊಂದು ಕಾಣಬರುತ್ತದೆ. ಅದು ಮೂರನೇ ಕೋಟೆ. ಇದರ ತಳದಲ್ಲಿ ಬೆಟ್ಟದ ಎರಡನೇ ಕೋಟೆ ಕಾಣುತ್ತದೆ. ನಯಗಾರಿಕೆ ಈ ಕೋಟೆ ಕಟ್ಟಡದಲ್ಲಿ ಕಾಣುತ್ತದೆ. ಇಲ್ಲಿ ಕಾಣುವ ಆರು ಬಂಡೆಗಳು ತಪಸ್ಸಿಗೆ ಕುಳಿತ ಮುನಿಗಳ ಶಿಲಾರೂಪವೆಂದು ಗ್ರಾಮೀಣರ ನಂಬಿಕೆಯಾಗಿದೆ. ಮುಂದೆ 40 ಅಡಿ ಸಾಗಿದರೆ ನಾಲ್ಕನೇ ಕೋಟೆಯ ಬಾಗಿಲ ಒರಟುಗಲ್ಲುಗಳು ಸ್ವಾಗತಿಸುತ್ತವೆ. ಹೀಗೆ ಏರುವ ಹಾದಿಯಲ್ಲಿ ಐದು ಕೋಟೆಗಳ ಅವಶೇಷಗಳು ಕಾಣುತ್ತವೆ. ಬೆಟ್ಟದ ನತ್ತಿಯಲ್ಲಿ ನೀರು ಇಂಗಿರುವ ದೊಡ್ಡ ಸೆಣೆಯ ನೆಲೆ ಇದೆ. ಇಟ್ಟಿಗೆ ಕಟ್ಟಡದ ತಳಗಟ್ಟು ಇದೆ. ರಾಮದೇವರ ಬೆಟ್ಟದ ವನಕುಂಭಿ ಮೇಲಿನ ಸೊಣೆ ಹಾಗೂ ಗಿರಿಮಾನವ ಶಿಲಾಮುಖದ ಬಳಿ ಇರುವ ಸೊಣೆಯ ಕಟ್ಟಡದ ರಚನೆಯನ್ನು ಇವು ನೆನಪಿಗೆ ತರುತ್ತವೆ.

ಸೊಣೆಯ ನೆಲೆ: ದುರ್ಗದ ಮೇಲಿನ ಸಮತಟ್ಟಿನ ಪ್ರದೇಶವೇ ಕೆಂಪೇಗೌಡನ ಹಜಾರ. ಅದರ ನೆರೆಗೆ ಕುದುರೆ ಲಾಯದ ಅವಶೇಷಗಳು ಕಾಣುತ್ತವೆ. ಸೊಣೆಯ ಸುತ್ತ ಕಲ್ಲು ಕೋಟೆಯ ಅವಶೇಷವಿದೆ. ಸುತ್ತ ಕಳ್ಳಿಯ ರಾಶಿ ಬೆಳೆದಿದೆ. ಸುಮಾರು 40 ಅಡಿ ಅಳದ ಸೊಣೆಯ ನೆಲೆ ಇದು ಎಂದು ಎಂ.ಜಿ. ನಾಗರಾಜ್ ತಿಳಿಸಿದರು.

ದುರ್ಗಕ್ಕೆ ಪೂರ್ವ ದಿಶಾಮುಖ ಹೋಗುವಲ್ಲಿ ಮಧ್ಯೆ ಎಡಪಾರ್ಶ್ವದಲ್ಲಿ ಬಂಡೆಯಲ್ಲಿ ಕೆಂಡು ಹೊಡೆದಂತಿರುವ ಜಾಗದಲ್ಲಿ 70 ಅಡಿ ಉದ್ದದ ಸೊಣೆ ಇದೆ. ಅರ್ಧವೃತ್ತಾಕಾರದ ಈ ಸೊಣೆಯ ಉತ್ತರ ಮುಖ ಭಿತ್ತಿಯಲ್ಲಿ ಎಡಬದಿಗೆ ಗೂಡುಗಳಂತಹ ರಚನೆ ಇದೆ. ಇದಕ್ಕೆ ಜನಸಂಸ್ಕೃತಿಯ ಭಕ್ತಿ ಗೌರವ ಸಂದಾಯವಾಗಿದೆ. ಅಚ್ಚಲು ಗ್ರಾಮದವರು ಹಾಗೂ ಚಿಕ್ಕೇನಹಳ್ಳಿಯ ಬೇಡರು ಸುಗ್ಗಿಯ ಸಮಯದಲ್ಲಿ ಈ ಸೊಣೆಯ ಒಳ ಬಂದು ಪೂಜೆ ಸಲ್ಲಿಸುತ್ತಾರೆ. ಸೊಣೆಯ ಬಳಿ ಐದು ಕಲ್ಲುಗಳನ್ನು ಸಾಲಾಗಿ ಬಸವನ ಸಂಕೇತವೆಂದು ಇಟ್ಟು, 'ಮುನೀಶ್ವರ'ನನ್ನು ಮಾಡುತ್ತಾರೆ.

ಸೊಣೆಯ ಬಳಿ ಗೂಡುಗಳ ಮೇಲಿನ ಭಿತ್ತಿಯಲ್ಲಿ ತ್ರಿಶೂಲಗಳ ಚಿತ್ರದ ನಡುವೆ ಸ್ತಂಭದ ಮೇಲೆ ವೃತ್ತಾಕೃತಿಯ ವ್ಯಾಸಗಳ ತುದಿಗಳಲ್ಲಿ ತ್ರಿಶೂಲ ಶಿರ ಸಂಕೇತ ಬಂದು ಪೂಜೆ ಮಾಡುತ್ತಾರೆ. ಅಚ್ಚಲು ದುರ್ಗದ ನೆಲೆ, ರೇವಣಸಿದ್ದೇಶ್ವರ ಬೆಟ್ಟದ ನೆಲೆಗಳಲ್ಲಿ ಮುನೀಶ್ವರನ ಸಂಚಾರ ಉಂಟೆಂದು ನಂಬಿಕೆ ಇದೆ. ರೇವಣಸಿದ್ದೇಶ್ವರ ಬೆಟ್ಟದ 'ರುದ್ರಮುನಿ' ಪ್ರಭಾವವೇ ಸದ್ಯದ ಮುನಿಪ್ರಭಾವವೇ ಮುನೀಶ್ವರ ಪೂಜೆಗೆ ಸಂಕೇತವಿರಬಹುದು ಎಂದು ತಿಳಿಸಿದರು.

ಬಾಕ್ಸ್‌
ಕೆಂಪೇಗೌಡರ ನೆಲೆ
ಅಚ್ಚಲು ದುರ್ಗ ಮಾಗಡಿ ಕೆಂಪೇಗೌಡರುಗಳ ರಹಸ್ಯ ಅಡಗುತಾಣವಾಗಿತ್ತು. ಯಲಹಂಕ ವಂಶದ ಮಾಗಡಿಯ ಕೊನೆ ಅರಸು ಕೆಂಪವೀರಪ್ಪಗೌಡ (ಕ್ರಿ.ಶ. 1710-28) ನನ್ನು ಮೈಸೂರು ದಳವಾಯಿಯು ಈ ದುರ್ಗದಲ್ಲಿ ಸೆರೆಹಿಡಿದ ಎಂಬುದು ಪ್ರಬಲ ಜನಪ್ರತೀತಿಯಾಗಿದೆ. ಆದರೆ ಸತ್ಯಾಂಶ ಬೇರೆಯೆ ಇರುವಂತಿದೆ. ಗೌಡನ ಎರಡನೇ ರಾಜಧಾನಿ ಸಾವನದುರ್ಗದ ನೆಲಪಟ್ಟಣವಾಗಿತ್ತು. ಅಲ್ಲಿ ತನ್ನ ಕುಟುಂಬವನ್ನು ನೆಲೆಗೊಳಿಸಿ ಸೇನಾಪತಿ ವೀರಭದ್ರನಾಯಕನನ್ನು ರಕ್ಷಣೆಗಿರಿಸಿ, ತಾನು ಉಳಿದ ದುರ್ಗಗಳ ಮೇಲ್ವಿಚಾರಣೆಗೆಂದು ಅಚ್ಚಲು ದುರ್ಗಕ್ಕೆ ಬಂದು ತಂಗಿದ್ದ. ಆದರೆ ವೀರಭದ್ರನಾಯಕನನ್ನು ಮೈಸೂರು ದಳವಾಯಿ ಸೆರೆಹಿಡಿದ ಸಂಗತಿ ತಿಳಿದು ಅಚ್ಚಲು ದುರ್ಗದಿಂದ ಐಜೂರು, ಕೂಟಗಲ್, ತಡಿಕವಾಗಿಲು, ಸುಗ್ಗನಹಳ್ಳಿ ಮೂಲಕ ದಾಟಿ ಬಂದು ಗುಪ್ತ ಮಾರ್ಗದಲ್ಲಿ ನೆಲಪಟ್ಟಣಕ್ಕೆ ಧಾವಿಸಿದ ಎಂದು ನಾಗರಾಜು ಮಾಹಿತಿ ನೀಡಿದರು.

ಕ್ರಿ.ಶ. 1728ರ ಯುದ್ಧದಲ್ಲಿ ಆತ ಮೈಸೂರು ದಳವಾಯಿ ಕೈಗೆ ಸೆರೆಯಾದ. ಜನರಿಗೆ ಇಲ್ಲಿಂದ ಗೌಡ ಸಾಗಿ ಹೋದದ್ದು ತಿಳಿಯದ ಕಾರಣ ಪ್ರತೀತಿಗೆ ಕಾರಣವಾಯಿತು.

*ಅಚ್ಚಲು ಬೆಟ್ಟ ಐತಿಹಾಸಿಕ ತಾಣ. ಶಿಲಾಯುಗದ ಪದ್ಧತಿಗಳನ್ನು ಹೋಲುವ ಕುರುಹುಗಳೂ ಇಲ್ಲಿರುವುದು ಅಚ್ಚರಿ ಹುಟ್ಟಿಸುತ್ತದೆ
ಡಾ. ಎಂ.ಜಿ. ನಾಗರಾಜ್‌, ಇತಿಹಾಸ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT