ರಾಮನಗರ: ‘ಚುನಾವಣೆ ಬಂತೆಂದರೆ ಬಿಜೆಪಿಯವರು ಪ್ರಧಾನಿ ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ. ಮೋದಿ ಮುಖದ ಅಸ್ತ್ರ ಬಿಟ್ಟರೆ ಅವರ ಬಳಿ ಬೇರೇನೂ ಇಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
ನಗರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನ ಹತ್ತು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆ ಬಹಳ ಮುಖ್ಯ. ವಿಶೇಷವಾಗಿ ಯುವಜನರು ಮತ್ತು ರೈತರ ಭವಿಷ್ಯ ಅತಂತ್ರವಾಗಿದೆ. ಜಿಎಸ್ಟಿ ಹೊರೆ, ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ರೈತರು ಬಳಸುವ ರಸಗೊಬ್ಬರ ಮತ್ತು ಯಂತ್ರೋಪಕರಣಗಳ ಬೆಲೆ ಏರಿಕೆಯಾಗಿದೆ. ಜೀವನ ಕಷ್ಟಕರವಾಗಿರುವ ಇಂತಹ ವಿಚಾರಗಳನ್ನು ಜನ ಗಂಭೀರವಾಗಿ ಚರ್ಚೆ ಮಾಡುತ್ತಿದ್ದಾರೆ’ ಎಂದರು.
‘ನನ್ನನ್ನು ಸೋಲಿಸುವುದಕ್ಕಾಗಿ ಪ್ರಚಾರಕ್ಕೆ ಬರುತ್ತಿರುವ ಬಿಜೆಪಿ ನಾಯಕರಿಗೆ ದೇವರು ಒಳ್ಳೆಯದು ಮಾಡಲಿ. ರಾಜ್ಯಕ್ಕೆ ಬರುವಾಗ ಕರ್ನಾಟಕ ಹಾಗೂ ಕನ್ನಡಿಗರಿಗೆ ಅವರು ಕೊಟ್ಟಿರುವ ಕೊಡುಗೆಗಳ ಪಟ್ಟಿಯನ್ನು ತಂದು ಮಾತನಾಡಲಿ. ನಾನು ತೆರಿಗೆ ವಿಚಾರವಾಗಿ ಎತ್ತಿರುವ ಪ್ರಶ್ನೆ ಬಗ್ಗೆಯೂ ಪ್ರತಿಕ್ರಿಯಿಸಲಿ. ನಂತರ ನಾನು ಉತ್ತರ ನೀಡುತ್ತೇನೆ’ ಎಂದರು.
ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಬಿಜೆಪಿ ಆರೋಪ ಕುರಿತ ಪ್ರಶ್ನೆಗೆ,‘ಕೆಲಸ ಇಲ್ಲದವರು ದಿನಾ ಟ್ವೀಟ್ ಮಾಡಿಕೊಂಡು ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ. ಜನ ನನ್ನನ್ನು ಕೆಲಸಗಾರ ಎಂದು ಪರಿಗಣಿಸಿದ್ದು, ನನ್ನ ಕೆಲಸಕ್ಕೆ ನಾನು ಕೂಲಿ ಕೇಳುತ್ತಿದ್ದೇನೆ. ಅವರಂತೆ ನಿತ್ಯ ಪಿಟಿಷನ್ ಬರೆಯುತ್ತಾ ಕೂತಿಲ್ಲ’ ಎಂದು ವ್ಯಂಗ್ಯವಾಡಿದರು.