ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಪಾದಯಾತ್ರೆಯಲ್ಲಿ ಮುನಿಸು ಬಹಿರಂಗ: ಸಿಪಿವೈ ಬೆಂಬಲಿಗರ ಮೇಲೆ ಎಚ್‌ಡಿಕೆ ಗರಂ

‘ಟಿಕೆಟ್ ಘೋಷಿಸಿ’ ಎಂದು ಕೂಗಿದ ಸಿಪಿವೈ ಬೆಂಬಲಿಗರ ಮೇಲೆ ಎಚ್‌ಡಿಕೆ ಗರಂ
Published : 5 ಆಗಸ್ಟ್ 2024, 23:40 IST
Last Updated : 5 ಆಗಸ್ಟ್ 2024, 23:40 IST
ಫಾಲೋ ಮಾಡಿ
Comments
ಸಿದ್ದರಾಮಯ್ಯ ಈಗ ಲೂಟಿರಾಮಯ್ಯ ಆಗಿದ್ದಾರೆ. ಅವರಿಗೆ ಮನೆ ಕಟ್ಟೋಕೆ 14 ನಿವೇಶನ ಬೇಕಿತ್ತಾ? ಅವರು ಬೇಗ ಸಿ.ಎಂ ಕುರ್ಚಿಯಿಂದ ಇಳಿಯಲಿ ಎಂದೇ ಶಿವಕುಮಾರ್ ಒಬ್ಬರೇ ಜನಾಂದೋಲನ ಕಾರ್ಯಕ್ರಮ ಮಾಡುತ್ತಿದ್ದಾರೆ
– ಆರ್. ಅಶೋಕ ವಿರೋಧ ಪಕ್ಷದ ನಾಯಕ
ಕಾರ್ಯಕರ್ತೆ ಸಾವು; ಮತ್ತೊಬ್ಬರು ಅಸ್ವಸ್ಥ
ಪಾದಯಾತ್ರೆಗೆ ಬಂದಿದ್ದ ಬೆಂಗಳೂರಿನ ಬನಶಂಕರಿಯ ಜೆಡಿಎಸ್ ಕಾರ್ಯಕರ್ತೆ ಗೌರಮ್ಮ (45) ಅವರು ಕೆಂಗಲ್ ಬಳಿ ಬೆಳಿಗ್ಗೆ 11.30ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟರು. ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅವರು ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆತಂದರು. ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗೌರಮ್ಮ ಅವರಿಗೆ ನಮನ ಸಲ್ಲಿಸಿದರು. ಚನ್ನಪಟ್ಟಣ ಸಮೀಪದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಬೆಂಗಳೂರಿನ ಜಯನಗರ ಮಂಡಲದ ಬಿಜೆಪಿ ಉಪಾಧ್ಯಕ್ಷ ಶಂಕರ್ ಎಂಬುವರು ಅಸ್ವಸ್ಥರಾಗಿ ಕುಸಿದರು. ತಕ್ಷಣ ಅವರನ್ನು ಚನ್ನಪಟ್ಟಣದ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಧೈರ್ಯ ತುಂಬಿದರು.
ವರದಿಗಾರರ ಮೇಲೆ ಹಲ್ಲೆ
ಚನ್ನಪಟ್ಟಣ ಬಳಿ ಬಂದ ಪಾದಯಾತ್ರೆ ವರದಿ ಮಾಡುತ್ತಿದ್ದ ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ವರದಿಗಾರರಾದ ಮೋಹನ್ ಜಿ. ಮಂಜುನಾಥ್ ಕ್ಯಾಮೆರಾಮನ್ ಅವಿರಾಜ್ ಹಾಗೂ ಚಾಲಕ ಆನಂದ್ ಅವರ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬೆಂಬಲಿಗರು ಹಲ್ಲೆ ನಡೆಸಿದರು. ವರದಿಗಾರರಿದ್ದ ಕಾರು ತಡೆದ ಬೆಂಬಲಿಗರು ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಪೂಂಜಾ ಸೇರಿದಂತೆ ಬೆಂಬಲಿಗರು ‘ಮಾಧ್ಯಮಗಳಿಂದ ಏನೂ ಕಿತ್ತುಕೊಳ್ಳೋಕೆ ಆಗಲ್ಲ’ ಎಂದು ಕೆಟ್ಟದಾಗಿ ನಿಂದಿಸಿದರು. ಆಗ ಕೆಲ ಬೆಂಬಲಿಗರು ಹಲ್ಲೆ ನಡೆಸಿದರು. ಘಟನೆ ಕುರಿತು ಮಾಧ್ಯಮದವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಗಮನಕ್ಕೆ ತಂದಾಗ ಶಾಸಕ ಮತ್ತು ಬೆಂಬಲಿಗರು ಕ್ಷಮೆ ಯಾಚಿಸಿದರು ಎಂದು ಮೂಲಗಳು ತಿಳಿಸಿವೆ.
ಸ್ಪರ್ಧೆ ಶತಸಿದ್ಧ; ಪಕ್ಷ ಗೊತ್ತಿಲ್ಲ: ಯೋಗೇಶ್ವರ್
ಚನ್ನಪಟ್ಟಣ: ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಶತಸಿದ್ಧ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ತೀರ್ಮಾನವನ್ನು ಬೆಂಬಲಿಗರು, ಹಿತೈಷಿಗಳಿಗೆ ಬಿಟ್ಟಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿ, ‘ಚನ್ನಪಟ್ಟಣ ಜನತೆ ನನ್ನ ಸ್ಪರ್ಧೆಯನ್ನು ಬಯಸುತ್ತಿದೆ. ನಿಮ್ಮ ಜೊತೆ ಇರುತ್ತೇವೆ ಎಂದು ಜನರು ಪಕ್ಷಾತೀತವಾಗಿ ಹೇಳುತ್ತಿದ್ದಾರೆ. ಆ.11ರಂದು ತಾಲ್ಲೂಕಿನಲ್ಲಿ ‘ನಮ್ಮ ಶಾಸಕ, ನಮ್ಮ ಹಕ್ಕು’ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಇದು ತಾಲ್ಲೂಕಿನ ರಾಜಕೀಯ ಅಸ್ಮಿತೆ, ಸ್ವಾಭಿಮಾನವನ್ನು ತೀರ್ಮಾನಿಸುವ ದಿಕ್ಸೂಚಿ ಆಗಲಿದೆ. ನಾನು ರಾಜಕೀಯದಲ್ಲಿ ಮುಂದುವರೆಯುವ ಅಥವಾ ರಾಜಕೀಯ ಬಿಡುವ, ಚುನಾವಣೆಗೆ ಸ್ವರ್ಧಿಸುವ ಇಲ್ಲವೇ ಹಿಂದೆ ಸರಿಯುವ ನಿರ್ಧಾರ ಆ ಸಭೆಯಲ್ಲಿ ಅಂತಿಮವಾಗಲಿದೆ’ ಎಂದು ಹೇಳಿದರು.
‘ದೆಹಲಿಯಲ್ಲಿ ನಿರ್ಧಾರ’
‘ಮೈತ್ರಿ ಅಭ್ಯರ್ಥಿ ಆಗುವ ನೀರಿಕ್ಷೆ ಇತ್ತು. ಅದಕ್ಕೆ ಪೂರಕ ವಾತಾ ವರಣವೂ ಇತ್ತು. ಆದರೆ ರಾಜಕೀಯ ಕಾರಣಗಳಿಂದ ಅಪಸ್ಪರ ಕೇಳಿ ಬರುತ್ತಿದೆ. ದೆಹಲಿಯಿಂದ ಅಂತಿಮ ನಿರ್ಧಾರ ಹೊರ ಬೀಳಲಿದೆ. ಈ ಬಗ್ಗೆ ಚರ್ಚಿಸಲು ಸಂಸದ ಬಸವರಾಜ ಬೊಮ್ಮಾಯಿ ಭೇಟಿಯಾಗುವಂತೆ ತಿಳಿಸಿದ್ದಾರೆ’ ಎಂದು ಯೋಗೇಶ್ವರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT