ಚನ್ನಪಟ್ಟಣ: ಸರ್ಕಾರ ರೈತರ ಅನುಕೂಲಕ್ಕಾಗಿ ವಿವಿಧ ಇಲಾಖೆಯ ಅಡಿಯಲ್ಲಿ ಅನೇಕ ಸೌಲಭ್ಯ ನೀಡಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಸಚಿವ ಆರ್. ಶಂಕರ್ ಕರೆ ನೀಡಿದರು.
ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಅನುದಾನದಲ್ಲಿ ಕೆಂಗಲ್ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯಿಂದ ನಿರ್ಮಾಣ ಮಾಡಿರುವ ತೊಟಗಾರಿಕೆ ಬೆಳೆಗಳ ಕೋಲ್ಡ್ ಸ್ಟೋರೇಜ್ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ತೋಟಗಾರಿಕಾ ಬೆಳೆಗಳನ್ನು ಕೆಡದಂತೆ ಸಂಗ್ರಹಿಸಲು ₹ 12.68 ಲಕ್ಷ ಅನುದಾನದಲ್ಲಿ ಐದು ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗಿದೆ. ಈ ಯೋಜನೆಗೆ ರಾಜ್ಯದಲ್ಲಿ ನಾಲ್ಕು ತಾಲ್ಲೂಕು ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ಚನ್ನಪಟ್ಟಣವೂ ಒಂದಾಗಿದೆ. ಚನ್ನಪಟ್ಟಣದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗಿದ್ದು, ರೈತರು ಇದನ್ನು ಸದ್ಬಳಕೆ ಮಾಡಕೊಳ್ಳಬೇಕು ಎಂದರು.
ಇದೇ ವೇಳೆ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಮಾವು ಬೆಳೆಯನ್ನು ವಿದೇಶಕ್ಕೆ ರಫ್ತು ಮಾಡುವ ನಿಟ್ಟಿನಲ್ಲಿ ‘ರಾಮಸಿರಿ ಬ್ರಾಂಡ್’ ಅನ್ನು ಸಚಿವ ಶಂಕರ್ ಉದ್ಘಾಟನೆ ಮಾಡಿದರು. ಅಲ್ಲದೆ ಮಾವು ಬೆಳೆಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇಡುವ ಸೌಲಭ್ಯ ಕಲ್ಪಿಸುವ ಬಗ್ಗೆ ಕಂಪನಿ ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಂಪನಿಯ ಅಧ್ಯಕ್ಷ ಗೌಡಗೆರೆ ದಯಾನಂದ ಸಾಗರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮುನಿಗೌಡ, ಸಹಾಯಕ ನಿರ್ದೇಶಕ ವಿವೇಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಕಂಪನಿಯ ಸಿಇಒ ಜ್ಯೋತಿ ಎಂ. ಗೌಡ, ಕಂಪನಿಯ ನಿರ್ದೇಶಕರು ಭಾಗವಹಿಸಿದ್ದರು.