ಮಾಗಡಿ: ಕೋವಿಡ್–19 ಹರಡದಂತೆ ತಡೆಗಟ್ಟಲು ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ನೀಡಿದ ಸಹಕಾರವನ್ನು ಬಿಜೆಪಿ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಆರೋಪಿಸಿದರು.
ಪಟ್ಟಣದ ತೋಟದ ಮನೆಯಲ್ಲಿ ಭಾನುವಾರ ಅಂಗವಿಕಲರು, ಪೌರಕಾರ್ಮಿಕರು ಹಾಗೂ ವಿವಿಧ ಸಮುದಾಯಕ್ಕೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ನ್ಯೂನತೆಗಳನ್ನು ಸರಿಪಡಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಬಿಜೆಪಿ ಸರ್ಕಾರ ಬೆಂಕಿ ಬಿದ್ದ ಮನೆಯಲ್ಲಿ ಜಂತಿ ಎಣಿಸುವ ಕೆಲಸ ಮಾಡುತ್ತಿದೆ. ಬೆಂಗಳೂರು ಜಿಲ್ಲೆಯನ್ನು ಹೊರತುಪಡಿಸಿದರೆ ಸರ್ಕಾರ ಕೊರೊನಾ ಹರಡದಂತೆ ತಡೆಗಟ್ಟಲು ಕೈಗೊಂಡಿರುವ ಕಾರ್ಯಕ್ರಮಗಳು ಬೇೆರೆಡೆಗೆ ತಲುಪಿಲ್ಲ. ಶಾಸಕ ಅರವಿಂದ ಲಿಂಬಾವಳಿ ಮಕ್ಕಳಿಗೆ ನೀಡಬೇಕಿದ್ದ ಸಕ್ಕರೆಯನ್ನು ಬಿಜೆಪಿ ಪಕ್ಷದ ಚಿನ್ಹೆ ಬಳಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ಪರೀಕ್ಷೆಗೆ ಕಿಟ್ ತರಿಸಲಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ 24 ಸಾವಿರ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ₹ 8,600 ಕೋಟಿ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲಿಲ್ಲ. ಆಂಧ್ರ ಮುಖ್ಯಮಂತ್ರಿ ಅವರು ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಸಹಾಯ ನೀಡಿದ್ದಾರೆ. ಅನುಭವಸ್ಥ ಕರ್ನಾಟಕ ಮುಖ್ಯಮಂತ್ರಿ ಅವರು ಸಣ್ಣ ಕೈಗಾರಿಕೆಗಳ ಬಗ್ಗೆ ಚಕಾರವೆತ್ತಿಲ್ಲ. ವಾರಿಯರ್ಸ್ಗೆ ಪುಷ್ಪಾರ್ಚನೆಗೆ ಬಳಸುವ ಖರ್ಚಿನ ಹಣವನ್ನು ಬೇರೆಡೆಗೆ ಬಳಸಿಕೊಂಡು ಸೇನಾನಿಗಳಿಗೆ ನಮಸ್ಕಾರ ಮಾಡಿದ್ದರೆ ಸಾಕಾಗಿತ್ತು. ಕೇಂದ್ರ ಮತ್ತು ರಾಜ್ಯಸರ್ಕಾರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಆಗುತ್ತದೆ ಎಂಬ ಕನಸು ನನಸಾಗಿಲ್ಲ ಎಂದು ಹೇಳಿದರು.
ದುಪ್ಪಟ್ಟಿಗೆ ಮಧ್ಯ: ಜಿಲ್ಲೆಯೊಂದರಲ್ಲಿ ಮದ್ಯಪಾನ ಮಾರಾಟ ನಿಷೇಧಿಸುವುದರಿಂದ ಅಂತರ ಜಿಲ್ಲೆಯ ಗಡಿಗಳ ಮೂಲಕ ಅಕ್ರಮವಾಗಿ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟವಾಗುತ್ತಿದೆ. ಇಡಿ ದೇಶದ್ಲಲಿಯೇ ಮದ್ಯಪಾನ ನಿಷೇಧಿಸಬೇಕು. ಕೋವಿಡ್–19 ರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಸಹಕಾರ ನೀಡಿದ್ದೇವೆ. ಆದರೆ ಸರ್ಕಾರದ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಸರ್ಕಾರದಲ್ಲಿ ಸಹಮತವಿಲ್ಲ. ಸಚಿವರು ಒಬ್ಬರ ಮಾತನ್ನು ಒಬ್ಬರು ಕೇಳುವುದಿಲ್ಲ. ಕೊರೊನಾ ನಿಯಂತ್ರಿಸಲು ಕಿಟ್ ತರಲಿಲ್ಲ. ಪ್ರಯೋಗಶಾಲೆ ನಿರ್ಮಿಸಲಿಲ್ಲ. ಕೆಎಂಎಫ್ ಮೂಲಕ ತರಕಾರಿ ಕೊಡುವುದಾಗಿ ಘೋಷಿಸಿದ್ದರೂ ಅನುಷ್ಠಾನವಾಗಿಲ್ಲ ಎಂದು ಟೀಕಿಸಿದರು.
ಆಹಾರ ಕಿಟ್ ವಿತರಣೆ
20 ಕೆ.ಜಿ.ಅಕ್ಕಿ, 2 ಕೆ.ಜಿ.ಬೇಳೆ, 1 ಕೆ.ಜಿ.ಸಕ್ಕರೆ, 1 ಲೀಟರ್ ಕಡ್ಲೆಕಾಯಿ ಎಣ್ಣೆ, 1 ಕೆ.ಜಿ ಉಪ್ಪು, ಮಾಸ್ಕ್ ವಿತರಿಸಲಾಯಿತು. ತೋಟದ ಆವರಣದ ಹೊರಗೆ ಎರಡು ಕಿ.ಮಿ.ಉದ್ದ ಎರಡು ಸಾವಿರಕ್ಕಿನ ಅಧಿಕ ಜನರು ಬೆಳಿಗ್ಗೆ 9 ಗಂಟೆಯಿಂದಲೆ ಸಾಲಾಗಿ ನಿಂತಿದ್ದರು. ಮಧ್ಯಾಹ್ನ 3 ಗಂಟೆಯ ತನಕ ಸಹಸ್ರಾರು ಜನರಿಗೆ ಕಿಟ್ ವಿತರಿಸಿದ ನಂತರವೂ ಆವರಣದ ಹೊರಗೆ ಕಿಟ್ ಪಡೆಯಲು ಸಹಸ್ರಾರು ಜನರು ನಿಂತಿದ್ದರು. ಸಾಲಾಗಿ ನಿಂತಿದ್ದವರ ಬಳಿಗೆ ತೆರಳಿದ ಎಚ್.ಎಂ.ರೇವಣ್ಣ ಪಡಿತರ ಚೀಟಿ ಇಲ್ಲದವರಿಗೆ ಕಿಟ್ ನೀಡಲಾಗುತ್ತಿದೆ. ಇಂದು ಕಿಟ್ ಸಿಕ್ಕಿಲ್ಲದವರಿಗೆ ಇನ್ನೊಮ್ಮೆ ಕಿಟ್ ಕೊಡಿಸುವುದಾಗಿ ತಿಳಿಸಿದರು. ಸಬ್ ಇನ್ಸ್ಪೆಕ್ಟರ್ ಟಿ.ವೆಂಕಟೇಶ್ ಹಾಗೂ ಸಿಬ್ಬಂದಿ ಕಿಟ್ ಪಡೆಯಲು ಸಾಲಾಗಿ ನಿಂತಿದ್ದವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಆಹಾರದ ಕಿಟ್ ದಾನಿಗಳಾದ ವತ್ಸಲಾ ರೇವಣ್ಣ, ರೋಹಿಣಿ ,ಚಿಕ್ಕರೇವಣ್ಣ, ಪುತ್ರ ಶಶಾಂಕ್, ಕಾರ್ಮಿಕ ಮುಖಂಡ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಹಿರಿಯರಾದ ಚಿಕ್ಕಅರುವಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಆರ್.ಮಂಜುನಾಥ, ಪುರಸಭೆ ಸದಸ್ಯ ಎಚ್.ಜೆ.ಪುರುಷೋತ್ತಮ್, ವಕೀಲರಾದ ರುದ್ರಾಚಾರ್, ಎಚ್.ಆರ್.ರುದ್ರೇಶ್, ಎಚ್.ಶಿವಕುಮಾರ್, ಕೋಟಪ್ಪನಪಾಳ್ಯದ ಆರ್.ಸುರೇಶ್, ಅನ್ಸರ್ ಪಾಷಾ, ತೇಜು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.