ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ವಶಕ್ಕೆ ಪಡೆದವರ ವಿರುದ್ಧ ಪ್ರತಿಭಟನೆ

ಐಜೂರು ವೃತ್ತದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರ ಆಕ್ರೋಶ
Last Updated 10 ಜುಲೈ 2019, 13:29 IST
ಅಕ್ಷರ ಗಾತ್ರ

ರಾಮನಗರ: ಮುಂಬೈನಲ್ಲಿ ಬಂಡಾಯ ಶಾಸಕರು ತಂಗಿರುವ ಹೋಟೆಲ್‌ ಮುಂದೆ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದ ಅಲ್ಲಿನ ಪೊಲೀಸರ ಕ್ರಮ ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬುಧವಾರ ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ವಿರುದ್ಧ ಧಿಕ್ಕಾರ ಕೂಗಿದರು. ರಸ್ತೆಯಲ್ಲೇ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

‘ಮುಂಬೈನ ರೆನೈಸೆನ್ಸ್ ಹೋಟೆಲ್‌ನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಆನ್‌ಲೈನ್‌ ಮೂಲಕ ಕೊಠಡಿ ಕಾಯ್ದಿರಿಸಿದ್ದರು. ಹೀಗಿದ್ದೂ ಅವರನ್ನು ಒಳಹೋಗಲು ಪೊಲೀಸರು ಬಿಟ್ಟಿಲ್ಲ. ಇದು ಕರ್ನಾಟಕದ ರಾಜಕೀಯದಲ್ಲಿ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ರಾಜಕೀಯ ಹಸ್ತಕ್ಷೇಪ ತೋರಿಸುತ್ತದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಪ್ರಜಾಪ್ರಭುತ್ವದಲ್ಲಿ ಕಾನೂನಾತ್ಮಕವಾಗಿ ರಚನೆಯಾದ ಸರ್ಕಾರವನ್ನು ಕೆಡವಲು ಬಿಜೆಪಿ ಸಂಚು ನಡೆಸಿದೆ. ಕೇಂದ್ರ ಸರ್ಕಾರವು ಕರ್ನಾಟಕದ ಆಡಳಿತ ಪಕ್ಷಗಳ ಶಾಸಕರ ಮೇಲೆ ಇಡಿ ಮತ್ತು ಐಟಿ ದಾಳಿಗಳನ್ನು ಮಾಡಿಸುವ ಬೆದರಿಕೆ ಹಾಕಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಜತೆಗೆ ಶಾಸಕಾಂಗದ ಸದಸ್ಯರನ್ನು ಭಯಭೀತರನ್ನಾಗಿ ಮಾಡಿ ಅವರಿಂದ ರಾಜೀನಾಮೆ ಕೊಡಿಸುವಲ್ಲಿ ಮುಂದಾಗಿದೆ. ಆ ಮೂಲಕ ಕರ್ನಾಟಕ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ’ ಎಂದು ದೂರಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ,ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ನಗರ ಘಟಕದ ಅಧ್ಯಕ್ಷ ಗೂಳಿಗೌಡ (ಕುಮಾರ್ ), ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎನ್‌. ನಟರಾಜು, ಕಾಂಗ್ರೆಸ್ ಮುಖಂಡರಾದ ಬಾಬು, ಗುರುಪ್ರಸಾದ್, ರೇಣುಕಪ್ಪ, ಪಾಪಣ್ಣ, ಅನಿಲ್ ಜೋಗಿಂದರ್ , ಜೆಡಿಎಸ್ ಮುಖಂಡರಾದ ರಾಮಕೃಷ್ಣಯ್ಯ, ನಾಗರಾಜು, ಹನುಮಂತೇಗೌಡ, ರಮೇಶ್ ಇದ್ದರು.

**
ಕೆಲ ಶಾಸಕರು ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ತೀರ್ಪಿಗೆ ವಿರುದ್ಧವಾಗಿ ರಾಜೀನಾಮೆ ನೀಡಿ ಬಿಜೆಪಿಯ ಆಮಿಷಕ್ಕೆ ಒಳಗಾಗಿದ್ದಾರೆ. ಇದು ಅವರು ಜನರಿಗೆ ಮಾಡಿದ ದ್ರೋಹ
– ಜಿ.ಎನ್‌. ನಟರಾಜು,ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT